ರಮೇಶ್ ಜಾರಕಿಹೊಳಿಗೆ ತಪ್ಪಿದ ಸ್ಥಾನ: ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ
Recommended Video
ಬೆಳಗಾವಿ, ಡಿಸೆಂಬರ್ 22: ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಇಷ್ಟು ಬೇಗ ತೆಗೆದು ಹಾಕಬಾರದಿತ್ತು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಗಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಬೆಳಗಾವಿಯ ಅಧಿಕಾರದ ಕದನ ದೊಡ್ಡ ಸುದ್ದಿಯಾಗಿತ್ತು. ಇದು ಪಕ್ಷದ ನಾಯಕ ವಿರುದ್ಧ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರು ಸಿಡಿದೇಳಲು ಕಾರಣವಾಗಿತ್ತು.
ಬಳಿಕ ನಾಯಕರ ಸತತ ಪ್ರಯತ್ನದ ಫಲವಾಗಿ ಅವರ ಬಂಡಾಯ ಶಮನವಾಗಿತ್ತು. ಆದರೂ ಅವರ ನಡುವಿನ ವೈಷಮ್ಯ ಬೂದಿ ಮುಚ್ಚಿದ ಕೆಂಡದಂತಿತ್ತು. ಪಕ್ಷದ ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮುಖಾಮುಖಿಯಾಗಿದ್ದರು. ಆದರೆ, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಅವರ ನಡುವಿನ ಸಿಟ್ಟು ತಣ್ಣಗಾಗಿರಲಿಲ್ಲ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ
ಈಗ ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟಿರುವುದು ಬೆಳಗಾವಿ ರಾಜಕೀಯದಲ್ಲಿ ಮತ್ತೊಂದಿಷ್ಟು ಚಟುವಟಿಕೆಗಳಿಗೆ ಕಾರಣವಾಗುವ ನಿರೀಕ್ಷೆ ಮೂಡಿಸಿವೆ. ರಮೇಶ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಆದರೆ, ಅವರ ಮಾತಿನಲ್ಲಿ ಬೇಸರಕ್ಕಿಂತ ವ್ಯಂಗ್ಯವೂ ಕಾಣಿಸಿದೆ.
ವೈಯಕ್ತಿಕವಾಗಿ ನೋವಾಗಿದೆ
'ರಮೇಶ್ ಸರ್ ಅವರು ಕೂಡ ಪ್ರಭಾವಿ ನಾಯಕರು. ಅವರು ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ನನಗೆ ವೈಯಕ್ತಿಕವಾಗಿ ನೋವಾಗಿದೆ' ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅವರಿಗೆ ಕೊಕ್ ನೀಡಿರುವುದು ಬಹಳ ನೋವುಂಟು ಮಾಡಿದೆ ಎಂದಿದ್ದಾರೆ.
ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಕಾಂಗ್ರೆಸ್ ಶಾಸಕರ ಪಟ್ಟಿ
ಇಷ್ಟು ಬೇಗ ಬಿಡಬಾರದಿತ್ತು
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಅವರೂ ಪ್ರಭಾವಿ ನಾಯಕರು. ಗೋಕಾಕ್ನ ಲಿಂಗಾಯತರ ಪ್ರಭಾವದ ನಡುವೆಯೂ ಗೆದ್ದು ಬಂದಿದ್ದಾರೆ. ಅವರನ್ನು ಇಷ್ಟು ಬೇಗ ಸಚಿವ ಸಂಪುಟದಿಂದ ತೆಗೆಯಬಾರದಿತ್ತು. ಸತೀಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಿರುವುದು ಸಂತಸ ಉಂಟುಮಾಡಿದೆ ಎಂದು ಲಕ್ಷ್ಮಿ ಹೇಳಿದ್ದಾರೆ.
ಎಚ್ಕೆ ಪಾಟೀಲ್ಗೆ ಸಿಕ್ಕಿದ್ದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ
ಲಿಂಗಾಯತರನ್ನು ಕಡೆಗಣಿಸಿಲ್ಲ
ಪಕ್ಷವು ಯಾವ ಲಿಂಗಾಯತರನ್ನೂ ಕಡೆಗಣಿಸಿಲ್ಲ. ಎಂಬಿ ಪಾಟೀಲ್ ಅಥವಾ ಬಿಸಿ ಪಾಟೀಲ್ ಸಚಿವರಾಗುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಡಿ. 22ರಂದು ವಿಸ್ತರಣೆಯಾಗಲಿದೆ ಎಂದು ನಾಯಕರು ತಿಳಿಸಿದ್ದರು. ಅದರಂತೆ ಮಾತು ಉಳಿಸಿಕೊಂಡಿದ್ದಾರೆ.
ಇಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ. ಹಂತಹಂತವಾಗಿ ಅವಕಾಶಗಳು ಸಿಗುತ್ತವೆ. ಎಲ್ಲ 30 ಜಿಲ್ಲೆಗಳ ಶಾಸಕರಿದ್ದಾರೆ. ಸತೀಶ್ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ. ಎಲ್ಲ ಪ್ರದೇಶಗಳಿಗೂ ಸೂಕ್ತ ಸ್ಥಾನಮಾನ ಸಿಕ್ಕಿದೆ.
ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಸೌಮ್ಯ ರೆಡ್ಡಿ ಅಸಮಾಧಾನ
ಹೈಕಮಾಂಡ್ ಹೇಳಿದ್ದೇ ಪ್ರಸಾದ
ನಾನು ಪ್ರಭಾವಿ ನಾಯಕಿಯಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಸೂಕ್ತ ಸಮಯ, ಸಂದರ್ಭದಲ್ಲಿ ಏನು ಹೇಳುತ್ತದೆಯೋ ಅದನ್ನು ನಾನು ಕೇಳುತ್ತೇನೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದು ನನಗೆ ಪ್ರಸಾದ. ಪಕ್ಷದ ಶಿಸ್ತಿನ ಸಿಪಾಯಿ ನಾನು.
ಯಾರಿಗೂ ಚುನಾವಣೆ ಬೇಕಾಗಿಲ್ಲ
ಪಕ್ಷದ ಆಯ್ಕೆಯನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದರಲ್ಲಿ ಪಕ್ಷದಲ್ಲಿ ಗೊಂದಲಗಳಿಲ್ಲ. ಯಾರೂ ಅತೃಪ್ತರಿಲ್ಲ. ಪಕ್ಷ ಸಂಘಟನೆ ಬಹಳಷ್ಟು ಸುಭದ್ರವಾಗಿದೆ. ಪಕ್ಷ ಇದ್ದರೆ ನಾವೂ ಇರುತ್ತೇವೆ. ಈಗಿನ ಸಂದರ್ಭದಲ್ಲಿ ಯಾರೂ ಚುನಾವಣೆಗೆ ಹೋಗಲು ಇಷ್ಟಪಡುವುದಿಲ್ಲ. ಬಿಜೆಪಿ ಶಾಸಕರಿಗೂ ಬೇಡ, ನಮಗೂ ಬೇಡ. ಈಗ ರಾಜ್ಯಕ್ಕೆ ಮತ್ತೊಂದು ಚುನಾವಣೆ ಬೇಕಾಗಿಲ್ಲ.