ಕುಮಾರಸ್ವಾಮಿ ವೀಕ್ ಸಿಎಂ ಅಲ್ಲ, ಪವರ್ ಫುಲ್: ಕೆ.ಜೆ.ಜಾರ್ಜ್
ಬೆಳಗಾವಿ, ಜುಲೈ.17 : ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಿಂದ ನನಗೆ ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ದಾರೆ. ಹಾಗೆಯೇ ಅವರು ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ವೀಕ್ ಸಿಎಂ ಆಗಿಲ್ಲ. ಪವರ್ ಫುಲ್, ಯಂಗ್ ಸ್ಟಾರ್ ಎಂದು ಪ್ರಶಂಸಿಸಿದರು.
ಕಾಂಗ್ರೆಸ್ ನಾಯಕರಿಂದ ನನಗೆ ತೊಂದರೆಯಾಗಿಲ್ಲ: ಕುಮಾರಸ್ವಾಮಿ
ಯಾರೇ ಆಗಲಿ ಸರ್ಕಾರ ನಡೆಸುವುದು ಅಷ್ಟು ಸುಲಭವಲ್ಲ. ಸರ್ಕಾರ ನಡೆಸುವುದೆಂದರೆ ಹೂವಿನ ಹಾಸಿಗೆ ಅಲ್ಲ. ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ. ಸಿಎಂ ಹುದ್ದೆ ಎಂಜಾಯ್ ಮಾಡುವ ಪೋಸ್ಟ್ ಅಲ್ಲ. ಅವರಿಗೂ ಜನರ ಕಷ್ಟ ಇರುತ್ತದೆ.
ಆ ಕಷ್ಟವನ್ನು ಕುಮಾರಸ್ವಾಮಿ ಕಣ್ಣೀರಿನ ಮೂಲಕ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಕಣ್ಣೀರು ಹಾಕಿರುವುದನ್ನು ಮಾಧ್ಯಮದವರು ಒಳ್ಳೆ ರೀತಿಯಿಂದ ತಗೋಬೇಕು. ಅದು ಬಿಟ್ಟು ಅಳ್ತಾರೆ ಅಳ್ತಾರೆ ಅಂದ್ರೆ ಹೇಗೆ. ಕುಮಾರಸ್ವಾಮಿ ಆಡಳಿತ ನಡೆಸಲು ಸಶಕ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಪತ್ರ ಚಳವಳಿ ಸಮರ್ಥಿಸಿಕೊಂಡ ಜಾರ್ಜ್, ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರು ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಪತ್ರದ ಮೂಲಕ ತಿಳಿಸುವುದು ತಪ್ಪಲ್ಲ.
ಅನ್ನ ಭಾಗ್ಯ ಯೋಜನೆಯಲ್ಲಿ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಸಮನ್ವಯ ಕಮಿಟಿಯಲ್ಲಿ ಮಾತನಾಡುತ್ತೇನೆ ಎಂದರು.