ಸಾಲ ಮನ್ನಾ ಮಾಡದಿದ್ದರೆ ಕುರ್ಚಿ ಖಾಲಿ ಮಾಡಿ : ಬಿಜೆಪಿ ಎಚ್ಚರಿಕೆ
Recommended Video
ಬೆಳಗಾವಿ, ಡಿಸೆಂಬರ್ 10 : ಭರವಸೆ ನೀಡಿದಂತೆ ರೈತರ ಸಾಲವನ್ನು ಮನ್ನಾ ಮಾಡಿ. ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ. ಕುರ್ಚಿ ಖಾಲಿ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದೆ.
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಬೃಹತ್ ರೈತ ಸಮಾವೇಶ ಆಯೋಜಿಸಿತ್ತು. ಅತ್ತ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಈ ಸಮಾವೇಶ ನಡೆಯಿತು.
ರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆ
ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಕಾಂಗ್ರೆಸ್ಗೆ ಬೆಂಬಲ ನೀಡಿದ್ದರಿಂದ ತಬ್ಬಲಿಗಳಾಗಿದ್ದೇವೆ ಎನ್ನುವ ಭಾವನೆ ಕಾಂಗ್ರೆಸ್ನಲ್ಲಿ ಕಾಣಿಸುತ್ತಿದೆ. ತಾವು ಬೀದಿಪಾಲಾಗುತ್ತಿದ್ದೇವೆ ಎನ್ನುವುದು ಗೊತ್ತಿದೆ. ಅವರಿಂದಲೇ ಸರ್ಕಾರ ಬಿದ್ದು ಹೋಗಲಿದೆ. ಅಲ್ಲಿಯವರೆಗೆ ಶಾಂತವಾಗಿ ಕಾಯುತ್ತೇವೆ' ಎಂದು ಹೇಳಿದರು.
ಕುಂದಾ, ಕರದಂಟು ಜತೆಗೆ ಬೆಳಗಾವಿ ಅಧಿವೇಶನಕ್ಕೆ ಅಂಟಿಕೊಂಡ ನಂಟು
ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಲಕ್ಷಣ ಸವದಿ, ಸಂಸದೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ವಿವಿಧ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಅಧಿವೇಶನಕ್ಕೆ ಹಾಜರಾದ ಅತೃಪ್ತರು, ಕಾಂಗ್ರೆಸ್ ನಿರಾಳ
ತುಘಲಕ್ ದರ್ಬಾರ್
'100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ, ಅಧಿಕಾರಕ್ಕೇರಿರುವ ಕುಮಾರಸ್ವಾಮಿ ಅವರು ತಮ್ಮ ಮಾತನ್ನು ಮರೆತು ತುಘಲಕ್ ದರ್ಬಾರ್ ನಡೆಸಿದ್ದಾರೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದರು.
ಸರ್ಕಾರ ತಕ್ಷಣ ನೆರವಿಗೆ ಬರಬೇಕು
'ಬರ ಪೀಡಿತ ಪ್ರದೇಶಗಳಿಗೆ ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರೂ ಭೇಟಿ ನೀಡಿಲ್ಲ. ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು' ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಸರ್ಕಾರ ಪಾಪರ್ ಆಗಿದೆಯೇ?
'ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿ ಮಾಡಲು ಸರ್ಕಾರದ ಬಳಿ ಹಣವಿಲ್ಲವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ರಾಜ್ಯ ಸರ್ಕಾರವೇನು ಪಾಪರ್ ಆಗಿದೆಯೇ?' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.
ಸಾಲಮನ್ನಾ ಹಗಲು ಕನಸು
'ಸಾಲಮನ್ನಾ ಮಾಡಲು ಮುಖ್ಯಮಂತ್ರಿಗಳು 53 ಷರತ್ತುಗಳನ್ನು ವಿಧಿಸಿದ್ದಾರೆ. ಇವೆಲ್ಲ ಷರತ್ತುಗಳನ್ನು ಪೂರೈಸಲು ರೈತರಿಂದ ಸಾಧ್ಯವಿಲ್ಲ. ಹೀಗಾಗಿ ಸಾಲಮನ್ನಾ ಎನ್ನುವ ರೈತರ ಆಶಯ ಹಗಲುಕನಸಾಗಿದೆ' ಎಂದು ದೂರಿದರು.
ಕುಮಾರಸ್ವಾಮಿ ಎಲ್ಲಿಗೆ ಮುಖ್ಯಮಂತ್ರಿ
'ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ಕುಮಾರಸ್ವಾಮಿ ಅವರು ಆಡಳಿತ ನಡೆಸುತ್ತಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆತು, ಹೊಳೆನರಸೀಪುರ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ' ಎಂದು ಲೇವಡಿ ಮಾಡಿದರು.