ಬೆಳಗಾವಿ : ಚರ್ಚೆ ನಡೆಯದೇ ಕೊನೆ ದಿನದ ಅಧಿವೇಶನ ಅಂತ್ಯ
ಬೆಳಗಾವಿ, ಡಿಸೆಂಬರ್ 21 : ಬಿಜೆಪಿ ಸದಸ್ಯರ ಧರಣಿ ಹಿನ್ನಲೆಯಲ್ಲಿ ಯಾವುದೇ ಚರ್ಚೆ ನಡೆಯದೇ ಚಳಿಗಾಲದ ಅಧಿವೇಶದನದ ಕೊನೆ ದಿನ ಅಂತ್ಯಗೊಂಡಿತು. ಈ ಮೂಲಕ 10 ದಿನಗಳಿಂದ ನಡೆಯುತ್ತಿದ್ದ ಅಧಿವೇಶನಕ್ಕೆ ತೆರೆ ಬಿದ್ದಿತು.
ಶುಕ್ರವಾರ ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಧರಣಿ ತೀವ್ರಗೊಂಡ ಹಿನ್ನಲೆಯಲ್ಲಿ ಕಪಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.
ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಕರ್ನಾಟಕ ವಿಧಾನ ಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ತಿದ್ದುಪಡಿ ವಿಧೇಯಕ, ಕರ್ನಾಟಕ ಸಿವಿಎಲ್ ಸೇವೆಗಳ ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ ವಿಧೇಯಕಗಳನ್ನು ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.
ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಗುರುವಾರ ಮತ್ತು ಶುಕ್ರವಾರದ ಕಲಾಪಕ್ಕೆ ಅಡ್ಡಿ ಮಾಡಿದರು. ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು....
ಕಾಟಾಚಾರದ ಅಧಿವೇಶನ
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, 'ಇದೊಂದು ಕಾಟಾಚಾರದ ಅಧಿವೇಶನ, ಸಾಲಮನ್ನಾ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಿಲ್ಲ. ಸುಸೂತ್ರವಾಗಿ ಸದನ ನಡೆಸುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಅಧಿವೇಶನ ಮೊಟಕುಗೊಳಿಸುವುದು ಅವರ ಉದ್ದೇಶವಾಗಿತ್ತು. ಅಧಿವೇಶನದಲ್ಲಿ ಯಾವುದೇ ವಿಚಾರದ ಬಗ್ಗೆ ಸರಿಯಾದ ಚರ್ಚೆ ಆಗಿಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ' ಎಂದು ಹೇಳಿದರು.
ಬಿಜೆಪಿಯವರಿಗೆ ಆಸಕ್ತಿ ಇಲ್ಲ
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, 'ಬಿಜೆಪಿಯವರಿಗೆ ಕಲಾಪದಲ್ಲಿ ಭಾಗವಹಿಸುವ ಆಸಕ್ತಿ ಇಲ್ಲ. ಹೀಗಾಗಿ ಧರಣಿ ನಡೆಸಿ ಕಲಾಪ ಮೊಟಕು ಮಾಡಿದ್ದಾರೆ. ಪ್ರಶ್ನೆಗೆ ಉತ್ತರ ಪಡೆಯುವ ಸೌಜನ್ಯವೇ ಇಲ್ಲ. ನಾವು ಬಹಿರಂಗ ಚರ್ಚೆ ಮಾಡಲು ಸಿದ್ಧರಿದ್ದೆವು. ಆದರೆ, ಬಿಜೆಪಿಯವರು ಆಸಕ್ತಿ ತೋರಲಿಲ್ಲ' ಎಂದು ಹೇಳಿದರು.
ಮುಖ್ಯಮಂತ್ರಿಗಳು ಕ್ಷಮೆ ಕೇಳಬಹುದಿತ್ತು
'ಅಧಿವೇಶದನ ಕೊನೆಯ ದಿನವಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಷಮೆ ಕೇಳಬಹುದಿತ್ತು. ಅವರು ತಮ್ಮ ಸೊಕ್ಕಿನ ಧಿಮಾಕಿನ ಮಾತು ಮುಂದುವರೆಸಿದ್ದಾರೆ. ಪ್ರತಿಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನ ನಡೆಸಬಹುದಿತ್ತು. ಆದರೆ, ಅವರು ವಿಧಾನಸೌಧಕ್ಕೆ ಬರಲೇ ಇಲ್ಲ. ಅವರಿಗೆ ರಾಜ್ಯದ ಜನರೇ ತಕ್ಕಪಾಠ ಕಲಿಸಲಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರಾಳ ದಿನ ಎಂದು ಭಾವಿಸಿದ್ದೇನೆ
'ಬಿಜೆಪಿಯ ಸ್ವ ಪ್ರತಿಷ್ಠೆಯಿಂದಾಗಿ ಕಲಾಪ ವ್ಯರ್ಥವಾಗಿದೆ. ಇವತ್ತು ಕರಾಳ ದಿನವೆಂದು ನಾನು ಭಾವಿಸಿದ್ದೇನೆ. ಸದನದ ನಿಯಮವನ್ನು ಬಿಜೆಪಿಯವರು ಗಾಳಿಗೆ ತೂರಿದ್ದಾರೆ. ಈ ಅಧಿವೇಶನದಲ್ಲಿ ಸಭಾಪತಿಯಾಗಿ ಕೆಲಸ ಮಾಡುವ ಆಸೆ ಇತ್ತು. ಎರಡು ದಿನವಾದ್ರು ನಾನು ಸಭಾಪತಿಯಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ' ಎಂದು ಹೇಳಿದರು.
ಕ್ಷಮೆ ಕೇಳುವುದಿಲ್ಲ
'ನಾನು ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರ ಕ್ಷಮೆ ಕೋರುವುದಿಲ್ಲ. ಅವರ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದರೆ ಅದು ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದಂತಾಗುತ್ತದೆ. ನಾನೇನು ಸನದಲ್ಲಿ ಅಸಂಸದೀಯ ಪದ ಬಳಕೆ ಮಾಡಿಲ್ಲ. ಹಾಗೆ ನೋಡಿದರೆ ಬಿಜೆಪಿ ನಾಯಕರೇ ಏನೇನೋ ಮಾತನಾಡಿದ್ದಾರೆ. ಇಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.