ನವೆಂಬರ್ 21ರಿಂದ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ
ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಸಚಿವ ತನ್ವೀಸ್ ಸೇಟ್ ಅಶ್ಲೀಲ ಚಿತ್ರ ವೀಕ್ಷಣೆ, ಬರಪರಿಹಾರ, ಮಹಾದಾಯಿ ಮತ್ತಿತರರ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.
ಬೆಳಗಾವಿ, ನವೆಂಬರ್, 20: ಸೋಮವಾರದಿಂದ (ನವೆಂಬರ್ 21) ಆರಂಭವಾಗುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸನ್ನಧ್ಧವಾಗಿದೆ.
ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಅಶ್ಲೀಲಚಿತ್ರ ವೀಕ್ಷಣೆ ಪ್ರಕರಣ ಹೆಚ್ಚಾಗಿ ಪ್ರತಿಧ್ವನಿಸುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮಟ್ಟದಲ್ಲಿ ಬರಗಾಲ ಆವರಿಸಿರುವುದರಿಂದ ಬರ ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿಯೂ ಹೆಚ್ಚು ಚರ್ಚೆ ನಡೆಯುವ ಸಾಧ್ಯತೆ ಇದೆ.
ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಒಂದು ದಿನ ಮೀಸಲಿಡುವುದಾಗಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ, ಮಹಾದಾಯಿ ನದಿನೀರು ವಿವಾದ, ಕರಾಳ ದಿನ ಆಚರಿಸಿ ಪುಂಡಾಟಿಕೆ ಮೆರೆದ ಎಂಇಎಸ್ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಸಹ ಸದನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಸೌಧದ ಸುತ್ತ ಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, 3500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ನವೆಂಬರ್ 21 ರಿಂದ ಡಿಸೆಂಬರ್ 2 ರವರೆಗೆ ವಿಧಾನಸೌಧಧ 1 ಕಿ.ಮೀ. ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಘೋಷಿಸಲಾಗಿದೆ.
ಸದನ ನಡೆಯುವ ಹಿನ್ನೆಲೆಯಲ್ಲಿ ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಸುವರ್ಣ ಸೌಧ ಬಸ್ ನಿಲ್ದಾಣ, ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಿವಿಧ ಪಕ್ಷಗಳ ಕಟೌಟ್ ಗಳು ರಾರಾಜಿಸುತ್ತಿವೆ. ವಿವಿಧ ಪಕ್ಷದ ಮುಖಂಡರ ಆಳೆತ್ತರದ ಕಟೌಟ್ ಗಳು ಎಲ್ಲೆಲ್ಲೂ ಕಾಣಿಸುತ್ತಿವೆ.
ಪೈಪೋಟಿ ಬಿದ್ದಿರುವಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ತಮ್ಮ ನಾಯಕರಿಗೆ ಶುಭ ಕೋರುವ ಕಟೌಟ್ ಗಳನ್ನು ಅಳವಡಿಸಿರು ದೃಶ್ಯಗಳು ನಗರದಾದ್ಯಂತ ಕಂಡು ಬರುತ್ತಿವೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಬಸ್ ನಿಲ್ದಾಣ ಸರ್ಕಿಟ್ ಹೌಸ್, ಸಚಿವರು, ಶಾಸಕರು ತಂಗಿರುವ ಹೋಟೆಲ್ ಗಳ ಬಳಿ ಕಟೌಟ್ ಗಳು, ಬ್ಯಾನರ್ ಗಳು, ಪಕ್ಷದ ಬಾವುಟಗಳು ಎಲ್ಲೆಲ್ಲೂ ಕಂಡು ಬರುತ್ತಿವೆ.