ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ, ನವೆಂಬರ್ 27 : ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ಶಿವಸೇನಾ ಮುಖ್ಯಸ್ಥ ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ (ನ.27)ರಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದ ಉದ್ದವ್ ಠಾಕ್ರೆ
ಪ್ರವೀಣ್ ಶೆಟ್ಟಿ ಮಾತನಾಡಿ, ಠಾಕ್ರೆ ವಂಶದ ಎಲ್ಲರೂ ಕೆಟ್ಟಹಾದಿಯನ್ನೇ ಹಿಡಿದವರು. ಬಾಳಾಸಾಬ ಠಾಕ್ರೆ ಹಾದಿಯನ್ನೇ ಉದ್ಧವ ಠಾಕ್ರೆ ಹಿಡಿದಿದ್ದಾರೆ. ಯಾವ ನೆಲದಲ್ಲಿ ಬದುಕುತ್ತೇವೆ ಆ ನೆಲಕ್ಕೆ ಗೌರವ ಕೊಡುವುದನ್ನು ಕಲಿಯಬೇಕು. ಉದ್ಧವ ಠಾಕ್ರೆ ಕರ್ನಾಟಕದಲ್ಲಿ ಶಿವಸೇನೆ ಸ್ಥಾಪನೆಗೆ ಹೊರಟಿದ್ದಾರೆ ಆದರೆ ಎಂದಿಗೂ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಇಎಸ್ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಉದ್ಧವ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು, ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ದೀಪಕ್ ಗುಡಗನಹಳ್ಳಿ ಮಾತನಾಡಿ, ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ಪ್ರಾಬಲ್ಯವಿದೆ. ಇಬ್ಬರು ಎಂಇಎಸ್ ಶಾಸಕರು ಜತೆಗೆ ಎಂಟರಿಂದ ಹತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಬಹುಮತ ಸಾಭೀತು ಪಡಿಸುವಷ್ಟು ಬೆಳಗಾವಿ ತಾಲೂಕು ಪಂಚಾಯತ್ ಸದಸ್ಯರು ಬಹುಮತ ಸಾಭೀತು ಪಡಿಸುವಷ್ಟು ಬೆಳಗಾವಿ ತಾಲೂಕು ಪಂಚಾಯತ್ ಸದಸ್ಯರು ಎಂಇಎಸ್ ನವರೇ ಚುನಾಯಿತರಾಗುತ್ತಾರೆ. ಹೀಗಿರುವಾಗ ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗಡಿನಾಡು ದುರ್ಬಲವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಬೆಳಗಾವಿ ಮಾಜಿ ಮೇಯರ್ ಸಿದ್ದನಗೌಡ ಪಾಟೀಲ್ ಮಾತನಾಡಿ, ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆ ವಿಭಜನೆ ಕಿಡಿ ಹೊತ್ತಿಸಿದ್ದಾರೆ. ಚಿಕ್ಕೋಡಿ ರಾಜಕಾರಣದ ವಿಭಜನೆ ಹುನ್ನಾರವೀಗ ತೀವ್ರ ವಿರೋಧಕ್ಕೆ ನಾಂದಿ ಹಾಡಿದೆ. ಸಿಎಂ ವಿಭಜನೆಯ ಮಾತಿನಿಂದ ಬೆಳಗಾವಿಯ ಕನ್ನಡ ಪರ ಸಂಘಟನೆಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ಹೇಳಿದರು.