ಮರಾಠಿ ಬಳಸಿದ್ದಕ್ಕೆ ಸ್ಪೈಸ್ ಏರ್ ಜೆಟ್ ಮೇಲೆ ಹರಿಹಾಯ್ದ ಕನ್ನಡಿಗರು
ಬೆಳಗಾವಿ, ನವೆಂಬರ್ 05 : ಬೆಳಗಾವಿಯು ಮಹಾರಾಷ್ಟ್ರದಲ್ಲಿದೆ ಎಂದು ಭಾವಿಸಿದಂತಿರುವ ಸ್ಪೈಸ್ ಏರ್ಲೈನ್ಸ್ ಸಂಸ್ಥೆಯ ವಿಮಾನವೊಂದು ಬೆಳಗಾವಿಯಲ್ಲಿ ಭೂಸ್ಪರ್ಷ ಮಾಡುವಾಗ ಮರಾಠಿ ಭಾಷೆಯಲ್ಲಿ ಸಂದೇಶ ಪ್ರಸಾರ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ನಿಲ್ದಾಣಗಳು ಬರುವ ಮುಂಚೆ ರಕ್ಷಣಾ ಸೂಚನೆಗಳನ್ನು, ನಿಲ್ದಾಣದ ಹೆಸರುಗಳನ್ನು ಹೇಳುವುದು ವಿಮಾನಗಳಲ್ಲಿ ಮಾಮೂಲಿ, ಸಾಮಾನ್ಯವಾಗಿ ಈ ಸಂದೇಶಗಳು ಇಂಗ್ಲೀಷ್, ಹಿಂದಿ ಹಾಗೂ ಸ್ಥಳೀಯ ಭಾಷೆಗಳಲ್ಲಿ ಇರುತ್ತವೆ ಆದರೆ ಸವೆಂಬರ್ 5 ರ ಭಾನುವಾರ ಬೆಳಗಾವಿಯಲ್ಲಿ ಭೂಸ್ಪರ್ಷ ಮಾಡಿದ ಸ್ಪೈಸ್ ಜೆಟ್ ವಿಮಾನವೊಂದು ನಿಲ್ದಾಣದಲ್ಲಿ ಇಳಿಯುವುದಕ್ಕೆ ಮುಂಚೆ ಮರಾಠಿಯಲ್ಲಿ ಧ್ವನಿ ಸಂದೇಶ ಬಿತ್ತರಿಸಿದೆ. ಇದರಿಂದ ಕುಪಿತಗೊಂಡ ಕನ್ನಡಿಗರು ವಿಮಾನ ಸಂಸ್ಥೆಯ ಮೇಲೆ ಹರಿಹಾಯ್ದ ಕಾರಣ ವಿಮಾನ ಸಂಸ್ಥೆಯು ಮರಾಠಿ ಭಾಷೆಯನ್ನು ಕೈಬಿಟ್ಟಿದೆ.
ಆದರೆ ಇದರಿಂದ ಸಂತುಷ್ಟಗೊಳ್ಳದ ಕನ್ನಡಪರ ಸಂಘಟನೆ ಸದಸ್ಯರು ಮರಾಠಿ ಭಾಷೆಯನ್ನು ಕೈಬಿಡುವುದಷ್ಟೆ ಅಲ್ಲ ಕನ್ನಡ ಭಾಷೆಯಲ್ಲಿ ಸಂದೇಶಗಳು ಬಿತ್ತರವಾಗುವಂತೆ ಮಾಡಬೇಕೆಂದು ಪಟ್ಟು ಹಿಡಿದಿವೆ.
'ಹಿಂದೆ ಯಾರ ಒತ್ತಡ ಇಲ್ಲದ ಹೊರತಾಗಿಯೂ ಮರಾಠಿ ಭಾಷೆಯಲ್ಲಿ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದ ಸ್ಪೈಸ್ ಜೆಟ್ ಇದೀಗ ಕನ್ನಡ ಭಾಷೆಯಲ್ಲಿ ಸಂದೇಶ ಪ್ರಸಾರ ಮಾಡಿರೆಂದು ಸಂಘಟನೆಗಳು, ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದರೂ ಸುಮ್ಮನಿರುವುದಕ್ಕೆ ಕಾರಣವೇನು' ಎನ್ನುತ್ತಿದ್ದಾರೆ ಕನ್ನಡಪರ ಸಂಘಟನೆಗಳ ಸದಸ್ಯರು.
ಕನ್ನಡದಲ್ಲಿ ಸಂದೇಶ ಪ್ರಸಾರ ಮಾಡದೇ ನಿರ್ಲಕ್ಷ್ಯ ಮಾಡಿದರೆ ಅದು ಭಾಷೆಗೆ ಮಾಡಿದ ಅವಮಾನವೆಂದು ಪರಿಗಣಿಸಿ ವಿಮಾನ ಸಂಸ್ಥೆಯ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಸ್ಪೈಸ್ ಏರ್ಲೈನ್ಸ್ ಸಂಸ್ಥೆ ತಾನು ಮಾಡಿದ ತಪ್ಪಿನಿಂದ ಎಚ್ಚೆತ್ತುಕೊಂಡು ಕನ್ನಡದಲ್ಲಿ ಸ್ವಾಗತ ಸಂದೇಶ ಪ್ರಸಾರ ಮಾಡುತ್ತದೆಯೋ ಇಲ್ಲವೊ ಕಾದು ನೋಡಬೇಕು.