ರಾಜೀನಾಮೆ ನೀಡಿ ಓಡಿಹೋದರೆ ಸಮಸ್ಯೆ ಸರಿಹೋಗುತ್ತಾ?: ರಮೇಶ್ ಕುಮಾರ್
ಬೆಳಗಾವಿ, ನವೆಂಬರ್ 16: "ಈ ಮಸೂದೆ ವೈದ್ಯರ, ವೈದ್ಯ ವೃತ್ತಿಯ, ವೈದ್ಯಕೀಯ ಸಂಸ್ಥೆಗಳ ವಿರುದ್ಧ ಅಲ್ಲ. ಸರಕಾರದ ಆರೋಗ್ಯ ಯೋಜನೆಗಳಿಗೆ ನಿಗದಿ ಮಾಡಿದೆ. ಈ ಹಿಂದೆಯೂ ವೈದ್ಯರು ಪ್ರತಿಭಟನೆ ಮಾಡಿದ್ದಾರೆ. ಜನರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಅನ್ನೋ ಕಾರಣಕ್ಕೆ ಕೆಲ ಯೋಜನೆಗಳನ್ನು ಸರಕಾರ ಜಾರಿ ಮಾಡಿತು" ಎಂದು ಸಚಿವ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ವೈದ್ಯರ ಮುಷ್ಕರ : 2.30ರ ಗಡುವು ಕೊಟ್ಟ ಹೈಕೋರ್ಟ್
ಇಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದವಾಯಿತು. ಆದರೆ 150 ಕೋಟಿ ರುಪಾಯಿ ಬಾಕಿ ಇತ್ತು. ಆ ಹಣ ನೀಡಿದರೆ ಚಿಕಿತ್ಸೆ. ಇಲ್ಲದಿದ್ದರೆ ಚಿಕಿತ್ಸೆ ಇಲ್ಲ ಎಂದು ಬೆದರಿಕೆ ಹಾಕಿ, ಮುಷ್ಕರ ಮಾಡಿದರು. ನನಗೆ ಯಾವ ಪ್ರತಿಷ್ಠೆಯೂ ಇಲ್ಲ ಎಂದು ಹೇಳಿದರು.
ಗುರುವಾರ ರಾತ್ರಿ 7 ಗಂಟೆಗೆ ಮುಖ್ಯಮಂತ್ರಿ ಜೊತೆ ಸಭೆ ಇದೆ. ಈ ಸನ್ನಿವೇಶದಲ್ಲಿ ನಾನು ರಾಜೀನಾಮೆ ಕೊಡುವ ಪರಿಸ್ಥಿತಿ ಉದ್ಭವಿಸಿಲ್ಲ. ರಾಜೀನಾಮೆ ಕೊಡಲು ನಾನು ಮಂತ್ರಿಯಾಗಿಲ್ಲ. ಹಾಗೆ ರಾಜೀನಾಮೆ ಕೊಟ್ಟು ಓಡಿ ಹೋದರೆ ಸಮಸ್ಯೆ ಪರಿಹಾರವಾಗಲ್ಲ ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಹೊರಟ ಸರಕಾರಕ್ಕೆ ಕೆಲವು ಪ್ರಶ್ನೆಗಳು
ಒಂದು ಕಾನೂನು ಮಾಡೋದು ತಪ್ಪು ಅಂದರೆ, ಕಳ್ಳತನ ಮಾಡಬಾರದು ಅಂತ ಕಾನೂನು ಮಾಡಿದರೆ ಖದೀಮ ಕದಿಯೋಕೆ ಹೆದರ್ತಾನೆ. ನಮ್ಮಲ್ಲಿ ಐಪಿಸಿ 302 ಕಾಯ್ದೆ ಇಟ್ಟುಕೊಂಡಿದ್ದೇವೆ. ಹಾಗಂತ ಸಮಾಜದಲ್ಲಿ ಇರೋರೆಲ್ಲ ಕಳ್ಳರು, ಕೊಲೆಗಾರರು ಅಂತಲೆ? ಆದರೆ ಅದರ ಬಗ್ಗೆ ಚರ್ಚೆಯೇ ಮಾಡಬಾರದು, ಶಾಸನ ಮಾಡಬೇಡಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಶಾಸಕರು, ಮಂತ್ರಿಗಳು ದಡ್ಡರು, ಮೂರ್ಖರು. ಆದರೆ ವೈದ್ಯರು ದಡ್ಡರಾ? ಪ್ರತಿಭಟನೆ ಮಾಡುವಾಗ ವೈದ್ಯರು ಯೋಚನೆ ಮಾಡಬೇಕು ಅಲ್ಲವಾ? ಸ್ವಲ್ಪ ಮಂದಿ ವೈದ್ಯರು ಪ್ರತಿಭಟನೆ ಮಾಡೋಣ, ಇನ್ನೂ ಸ್ವಲ್ಪ ಮಂದಿ ವೈದ್ಯರು ಸೇವೆ ಮಾಡೋಣ ಎಂದು ತೀರ್ಮಾನ ಮಾಡಬೇಕು ಅಲ್ಲವಾ ಎಂದರು.
ಜನಸಾಮಾನ್ಯರು ಏನು ಮಾಡಿದರು, ರೋಗಿಗಳು ಏನು ಮಾಡಿದರು? ಕೆಲ ಮಾದ್ಯಮಗಳು ಬಾಯಿಗೆ ಬಂದಂತೆ ಪ್ರಚಾರ ಮಾಡುತ್ತಿವೆ. ಚಿಕಿತ್ಸೆ ವಿಫಲವಾದರೆ ವೈದ್ಯರಿಗೆ ಜೈಲು ಶಿಕ್ಷೆ ಎಂದು ಮಾಧ್ಯಮಗಳು ಪ್ರಚಾರ ಮಾಡಿವೆ. ಇವರ್ಯಾರಿಗೂ ಜವಾಬ್ದಾರಿ ಇಲ್ಲವಾ? ರೋಗಿ ಸತ್ತಾಗ ಆಸ್ಪತ್ರೆಯವರು ಹೆಣವನ್ನು ಕೊಡದೇ ಇದ್ದಾಗ ಇವರು ಪ್ರಸಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಗುರುವಾರ ಸಂಜೆ ಮುಖ್ಯಮಂತ್ರಿ ಜೊತೆ ಸಭೆ ಇದೆ. ವಿಧೇಯಕ, ವೈದ್ಯರ ಮುಷ್ಕರದ ಬಗ್ಗೆ ಚರ್ಚೆ ನಡೆಸುತ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ವೈದ್ಯರೂ ನಮ್ಮ ಜೊತೆ ಮುಕ್ತ ಚರ್ಚೆಗೆ ಬರಲಿ ಎಂದು ಸಚಿವ ರಮೇಶ್ ಕುಮಾರ್ ಹೇಳಿದರು.