ಭಾರೀ ಮಳೆ, ಬೆಳಗಾವಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಸರ್ಕಾರಿ ಬಸ್ ಬಚಾವ್
ಬೆಳಗಾವಿ, ಜೂನ್ 3: ಬೆಳಗಾವಿ ಜಿಲ್ಲೆಯಾದ್ಯಂತ ಶನಿವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಸರ್ಕಾರಿ ಬಸ್ಸೊಂದು ಸ್ವಲ್ಪದರಲ್ಲೇ ಬಚಾವ್ ಆಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕುಂಬಿ-ಚುಳಕಿ ಮಾರ್ಗದ ಮಧ್ಯದಲ್ಲಿ ಸೇತುವೆ ಬರುತ್ತದೆ. ಸುತ್ತ ಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದ ಈ ಸೇತುವೆ ತುಂಬಿ ಹರಿಯುತ್ತಿತ್ತು.
ಇನ್ನೆರಡು ದಿನಗಳಲ್ಲಿ ರಾಜ್ಯಾದ್ಯಂತ ಮುಂಗಾರು ಚುರುಕು
ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ನರಗುಂದ ಪಟ್ಟಣದಿಂದ ಸವದತ್ತಿಗೆ ಹಿಂತಿರುಗುತ್ತಿದ್ದ ಸರ್ಕಾರಿ ಬಸ್ ಆಗಮಿಸಿದೆ. ಆಗ ಸೇತುವೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದುದನ್ನು ಗಮನಿಸದೆ ನೇರವಾಗಿ ಚಾಲಕ ಬಸ್ ಚಲಾಯಿಸಿದ್ದಾನೆ.
ಈ ವೇಳೆ ಬಸ್ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಮುಂದೆ ಹೋಗಿದೆ. ಆದರೆ ಅರ್ಧ ಸೇತುವೆಯಲ್ಲೇ ಸಿಕ್ಕಿ ಹಾಕಿಕೊಂಡಿತು. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ನಂತರ ಬಸ್ಸನ್ನು ಜೆಸಿಬಿ ಸಹಾಯದಿಂದ ಗ್ರಾಮಸ್ಥರು ಹೊರ ತೆಗೆದರು. ಒಂದೊಮ್ಮೆ ಬಸ್ ಪೂರ್ತಿ ಕೊಚ್ಚಿ ಹೋಗಿದ್ದರೆ ಬಸ್ಸಿನಲ್ಲಿ ಹದಿನೈದಕ್ಕೂ ಅಧಿಕ ಪ್ರಯಾಣಿಕರು ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವಿತ್ತು.
ನರಗುಂದ ಪಟ್ಟಣದಿಂದ ಸವದತ್ತಿಗೆ ಬಸ್ ಹಿಂತಿರುಗುವಾಗ ಈ ಘಟನೆ ನಡೆದಿದೆ.