ವಿಧಾನ ಪರಿಷತ್ ನಲ್ಲಿ ಸಿದ್ದು -ಈಶು ಏಟು, ತಿರುಗೇಟು
ಬೆಳಗಾವಿ, ನವೆಂಬರ್ 13: ಜಾರ್ಜ್ ಅವರ ರಾಜೀನಾಮೆ ಕೇಳಿದರೆ ರಾಜಕೀಯವಾಗಿ ಲಾಭ ಆಗುತ್ತದೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಯಾವ ಲಾಭವೂ ಆಗಲ್ಲ. ರಾಜಕೀಯವಾಗಿ ನಾವೂ ಎದುರಿಸುತ್ತೇವೆ. ಬನ್ನಿರಿ ಫೀಲ್ಡ್ ಗೆ ನೋಡೋಣ ಎಂದು ಸಿದ್ದರಾಮಯ್ಯ ಬಿಜೆಪಿಯವರಿಗೆ ಸವಾಲು ಎಸೆದರು.
ಕೆ.ಜೆ. ಜಾರ್ಜ್ ಅವರಿಂದ ರಾಜಿನಾಮೆ ಪಡೆಯುವ ಪ್ರಶ್ನೆಯೇ ಇಲ್ಲ:ಸಿದ್ದರಾಮಯ್ಯ
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯ ಶಾಸಕರ ವಿರುದ್ಧ ಕಾಂಗ್ರೆಸ್ ನಿಂದ ಧಿಕ್ಕಾರ ಘೋಷಣೆ ಮೊಳಗಿಸಲಾಯಿತು. ಪ್ರತಿಯಾಗಿ ಧರಣಿ ನಿರತ ಬಿಜೆಪಿಯವರಿಂದಲೂ ಧಿಕ್ಕಾರದ ಘೋಷಣೆ ಕೇಳಿಬಂತು.
ವಿಧಾನ ಪರಿಷತ್ ನಲ್ಲಿ ರೋಷಾವೇಶದಿಂದ ಮಾತನಾಡಿದ ಸಿದ್ದರಾಮಯ್ಯ, "ಬನ್ನಿ ಫೀಲ್ಡ್ ಗೆ ವಿ ವಿಲ್ ಫೇಸ್ ಯು" ಎಂದು ಸವಾಲು ಹಾಕಿದರು. ಜಾರ್ಜ್ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಜನ ಪಾಠ ಕಲಿಸುತ್ತಾರೆ. ಮತ್ತೆ ಇವರು ಗೆಲ್ಲಲು ಸಾಧ್ಯವೇ ಇಲ್ಲ. ಈ ಹಿಂದೆ 110 ಸ್ಥಾನದಲ್ಲಿ ಗೆದ್ದಿದ್ದವರು 40ಕ್ಕೆ ಇಳಿದಿದ್ದೀರಿ ಎಂದು ಕುಟುಕಿದರು.
ಬಿಜೆಪಿ- ಕೆಜೆಪಿ ಅಂತ ಒಡೆದ ಕಾರಣ ಲಾಟರಿ ಹೊಡೆದು ಮುಖ್ಯಮಂತ್ರಿ ಆದಿರಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಕೂಡ ತಿರುಗೇಟು ನೀಡಿದರು.