ಬೆಳಗಾವಿ : ಕುಮಾರಸ್ವಾಮಿ ಜನತಾ ದರ್ಶನ, ಹಲವು ಸಮಸ್ಯೆ ಪರಿಹಾರ
ಬೆಳಗಾವಿ, ಸೆಪ್ಟೆಂಬರ್ 16 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಜನತಾದರ್ಶನ ನಡೆಸಿದರು. ಉತ್ತರ ಕರ್ನಾಟಕದ ಭಾಗದ ಜನರು ಸಾಗರೋಪಾದಿಯಲ್ಲಿ ಬಂದು ತಮ್ಮ ಅಹವಾಲನ್ನು ತೋಡಿಕೊಂಡರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶನಿವಾರ ಬೆಳಗಾವಿಗೆ ಭೇಟಿ ನೀಡಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಅವರು ಜನತಾದರ್ಶನ ನಡೆಸಿದರು, ಜನರ ಅಹವಾಲುಗಳನ್ನು ಆಲಿಸಿದರು. ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು.
ಹಿರಿಯಣ್ಣನಂತೆ ವಿಕಲಚೇತನರ ಅಹವಾಲು ಆಲಿಸಿದ ಕುಮಾರಣ್ಣ
ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನಕ್ಕೆ ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ವಿಕಲಚೇತನರು, ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ತೋಡಿಕೊಂಡರು. ನೆಲ ಮಹಡಿಯಲ್ಲಿ ವಿಕಲಚೇತನರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಾಧಾನದಿಂದ ಎಲ್ಲರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿ, ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಿದರು. ಕೆಲವರಿಗೆ ಆರ್ಥಿಕ ನೆರವು, ಆರೋಗ್ಯ ಸೌಲಭ್ಯ ಕೊಡಿಸುವ ಹಾಗೂ ಉದ್ಯೋಗ ಒದಗಿಸುವ ಭರವಸೆ ನೀಡಿದರು.
ಚಿಕಿತ್ಸೆಗೆ ಸಹಕಾರ ನೀಡಿದ ಮುಖ್ಯಮಂತ್ರಿಗಳು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ನೀಲಜಿ ಗ್ರಾಮದ ಮಹಾದೇವಿ ಶ್ರೀಶೈಲ ಜಂಗಮ ದಂಪತಿಯ 10 ತಿಂಗಳ ಮಗುವಿಗೆ ಕೀಲು ಸಂಬಂಧಿ ರೋಗವಿದ್ದು ಮಗುವಿನ ಕಾಲುಗಳು ಹಾಗೂ ಕೈಗಳು ಸ್ವಾಧೀನದಲ್ಲಿಲ್ಲ. ತೀವ್ರ ಬಡತನದಲ್ಲಿ ಬದುಕುತ್ತಿರುವ ಇವರು ಆಪರೇಷನ್ಗೆ ತುಂಬಾ ಹಣ ವೆಚ್ಚವಾಗಲಿದ್ದು ನಮ್ಮ ಬಳಿ ಹಣವಿಲ್ಲ ಎಂದು ಹೇಳಿದರು.
ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹಾಗೂ ಸಂಬಂಧಿಸಿದ ಖರ್ಚುಗಳಿಗೆ ನೆರವು ನೀಡುವ ಭರವಸೆಯನ್ನು ನೀಡಿದರು. ಮುಂದಿನ ವಾರ ಬೆಂಗಳೂರಿಗೆ ಬರುವಂತೆ ಮಹಾದೇವಿಗೆ ತಿಳಿಸಿದರು.
ಉದ್ಯೋಗ ಕೊಡಿಸುವ ಭರವಸೆ
ಬೆಳಗಾವಿಯ ಗೋಕಾಕ್ ತಾಲೂಕು ಪಟಗುಂದಿಯ ವಿಶೇಷ ಚೇತನ ರೂಪಾ (28) ಇವರು ಎಂಎಸ್ ಡಬ್ಲು ಓದಿದ್ದು ಕಂಪ್ಯೂಟರ್ ಕೋರ್ಸ್ ಕೂಡಾ ಮಾಡಿದ್ದೇನೆ ಉದ್ಯೋಗ ಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಸದ್ಯದಲ್ಲಿ ನಿಮಗೆ ಅಧಿಕಾರಿಗಳು ಫೋನ್ ಮಾಡಲಿದ್ದಾರೆ ಎಂದು ಹೇಳಿದರು.
ಆರ್ಥಿಕ ನೆರವು ಕೇಳಿದರು
ದಾವಣಗೆರೆ ತಾಲೂಕಿನ ಈಜಕಟ್ಟ ಗ್ರಾಮದ ರಾಮಾನಾಯ್ಕ್ (70) ಪಾರ್ಶ್ವವಾಯು ರೋಗ ಪೀಡಿತರಾಗಿದ್ದು, ಅವರ ಪತ್ನಿ ಪಾರಿಬಾಯಿ ಗರ್ಭಕೋಶ ಕ್ಯಾನ್ಸರ್ ಬಾಧಿತರಾಗಿದ್ದಾರೆ. ಅವರ ನಾಲ್ಕು ಹೆಣ್ಣುಮಕ್ಕಳಿಗೆ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಕಡುಬಡವರಾದ ರಾಮಾನಾಯ್ಕ್ ದಂಪತಿಗೆ ಆದಾಯ ಮೂಲಗಳಿಲ್ಲ, ಆಸ್ಪತ್ರೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ.
ಜನತಾ ದರ್ಶನದಲ್ಲಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಆಸ್ಪತ್ರೆ ವೆಚ್ಚ ಹಾಗೂ ಬದುಕಲು ಆರ್ಥಿಕ ನೆರವು ನೀಡುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
3.5 ಲಕ್ಷ ಆರ್ಥಿಕ ನೆರವು
ಗೋಕಾಕ್ ತಾಲೂಕು ನಾಗನೂರಿನ ವಿಠಲ ಸಿದ್ದಪ್ಪ ಬಾಗೇವಾಡಿ 10 ತಿಂಗಳ ಹಿಂದೆ ಮುದೋಳ್ ಬಳಿ ಮೋಟಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಕಾಲು ಮೂಳೆ ಮುರಿದಿದೆ. ಈ ಸಂಬಂಧ ಕೇಸು ದಾಖಲಾಗಿದೆಯಾದರೂ ಡಿಕ್ಕಿ ಹೊಡೆದ ಲಾರಿ ಸಿಕ್ಕಿಲ್ಲ.
ತೀವ್ರ ಬಡತನದಲ್ಲಿರುವ ಇವರ ಪತ್ನಿ ಕೂಡ ನಿಧನರಾಗಿದ್ದಾರೆ. 6 ಮತ್ತು8 ವರ್ಷದ ಇಬ್ಬರು ಮಕ್ಕಳಿದ್ದು, ಅಜ್ಜಿಯ ಆಶ್ರಯದಲ್ಲಿದ್ದಾರೆ. ಜನತಾ ದರ್ಶನದಲ್ಲಿ ಕಷ್ಟ ವಿಚಾರಿಸಿದ ಮಾನ್ಯ ಮುಖ್ಯಮಂತ್ರಿಗಳು 3.5ಲಕ್ಷ ಆರ್ಥಿಕ ನೆರವು ನೀಡುವುದಾಗಿ ತಿಳಿಸಿ, ಅದನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸಿ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಲು ಸೂಚಿಸಿದರು.
ಕುಟುಂಬಕ್ಕೆ 3 ಲಕ್ಷ ನೆರವು
ಹುಕ್ಕೇರಿ ತಾಲೂಕು ಯಲ್ಲಾಪುರ ಕರಗುಪ್ಪಿಯ ಶ್ರೀಕಾಂತ ಕಾಡಗೋಡ ( 40) ನರರೋಗದಿಂದ ಬಳಲುತ್ತಿದ್ದಾರೆ. ಕಳೆದ 20ವರ್ಷಗಳಿಂದ ಅವರಿಗೆ ಈ ಖಾಯಿಲೆ ಇದ್ದು ಈವರೆಗೆ ಕೈಯಲ್ಲಿದ್ದ ಹಣ ಅಲ್ಪಸ್ವಲ್ಪ ಆಸ್ತಿಯನ್ನು ಕಳೆದುಕೊಂಡಿದ್ದಾರೆ.
7ವರ್ಷದ ಈಶ್ವರಿ ಹಾಗೂ 4 ವರ್ಷದ ಬಸವನಗೌಡ ಎಂಬ ಇಬ್ಬರು ಚಿಕ್ಕ ಮಕ್ಕಳನ್ನು ಕೂಲಿ ಮಾಡಿ ಪತ್ನಿ ಮಲ್ಲಮ್ಮ ಸಾಕುತ್ತಿದ್ದಾರೆ. ಇವರ ಕಥೆ ಕೇಳಿದ ಕುಮಾರಸ್ವಾಮಿ ಅವರು 3 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಹಾಗೂ ಈ ಹಣವನ್ನು ಠೇವಣಿ ಇರಿಸಿ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುವಂತೆ ತಿಳಿಸಿದರು.
ಚಿಕಿತ್ಸೆಗೆ 5 ಲಕ್ಷ ರೂ ನೆರವು
ನವಲಗುಂದ ತಾಲುಕು ಅಳಗವಾಡಿಯ ಮನೋಜ್ ಯಡ್ರಾಮಿ (15) ಹಾಗೂ ಸಚಿನ್ ಯಡ್ರಾಮಿ (18) ಗೆ ದಾಟಾ 2 ಎಂಬ ವಿಚಿತ್ರ ಖಾಯಿಲೆ ಕಾಣಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಈ ಕಾಯಿಲೆಯಿದ್ದು, ರಕ್ತ ವಾಂತಿಯಾಗುತ್ತದೆ.
ವಾರಕ್ಕೋಮ್ಮೆ ರಕ್ತ ಕೊಡಿಸಬೇಕಿದೆ. ಈಗಾಗಲೇ ಕೈಯಲ್ಲಿದ್ದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡಿರುವುದಾಗಿ ಅವರ ಸಂಬಂಧಿ ಮಲ್ಲಿಕಾರ್ಜುನ ಯಡ್ರಾಮಿ ಮುಖ್ಯಮಂತ್ರಿಯವರ ಮುಂದೆ ಅಳಲು ತೋಡಿಕೊಂಡರು. ನಂತರ ಇಬ್ಬರಿಗೂ ತಲಾ 5ಲಕ್ಷ ರೂ. ನೆರವು ನೀಡುವುದಾಗಿ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು.