ಸರ್ಕಾರಿ ಆಸ್ತಿಯನ್ನೇ ಮಾರಿಕೊಂಡ ಅಧಿಕಾರಿಗಳು
ಬೆಳಗಾವಿ, ಡಿಸೆಂಬರ್ 01 : ಸರ್ಕಾರದ ಆಸ್ತಿ ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳೆ ಸರ್ಕಾರಕ್ಕೆ ಸೇರಿದ ಆಸ್ತಿಯನ್ನು ಮತ್ತೊಬ್ಬರ ಹೆಸರಿಗೆ ಪಹಣಿಪತ್ರ ತಯಾರಿಸಿ ಮಾರಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಆಗಿರುವುದಿಷ್ಟು, 1976 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ್ ಗ್ರಾಮ ಹಿಡಕಲ್ ಜಲಾಶಯ ಹಿನ್ನಿರಿನಲ್ಲಿ ಮುಳಗಡೆಯಾಗಿದೆ. ಮುಳುಗಡೆಯಾದ ಜಮೀನಿನ ರೈತರಿಗೆ ಹಣ ಸಂದಾಯ ಮಾಡಿ ಆಸ್ತಿ ಪತ್ರದಲ್ಲಿ ಸರ್ಕಾರದ ಆಸ್ತಿ ಎಂದು ಸಮೂದಿಸಿಕೊಂಡಿದೆ.
ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಹಣದ ದಾಹಕ್ಕೆ ಸರಕಾರದ ಹೆಸರಲ್ಲಿರುವ 4 ಕೋಟಿ ಬೆಲೆಬಾಳುವ 31 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಪಡೆದು ಜಮೀನುಗಳನ್ನು ಪಹಣಿಪತ್ರಗಳನ್ನು ಖಾಸಗಿಯವರ ಹೆಸರಿಗೆ ಮಾಡಿಕೊಟ್ಟುಬಿಟ್ಟಿದ್ದಾರೆ. ಈ ವಿಷಯ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಯಾವುದೇ ಸರ್ಕಾರಿ ಆದೇಶಗಳಿಲ್ಲದೆ ಒಂದೇ ಕುಟುಂಬದ ಏಳು ಜನರಿಗೆ ಆಸ್ತಿ ವರ್ಗಾವಣೆಯಾಗಿದೆ. ಈ ವಿಷಯವಾಗಿ ಹುಕ್ಕೆರಿ ತಾಲೂಕಿನ ತಹಶಿಲ್ದಾರ ಕಛೇರಿಯಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೇಳಿದರೆ. ಇದಕ್ಕೆ ಸಂಬಂದ ಪಟ್ಟ ಯಾವದೇ ಆದೇಶ ಪ್ರತಿಗಳು ನಮ್ಮಲ್ಲಿ ಲಭ್ಯವಿಲ್ಲ ಡೈರಿ ನಂಬರ 1049 ಮಾತ್ರ ಲಭ್ಯವಿದೆ ಎಂಬ ಉತ್ತರ ದೊರೆತಿದೆ.
ಈ ಜಮೀನಿನ ಹಸ್ತಾಂತರ ಹಿಡಕಲ್ ಜಲಾಶಯದ ಮುಳುಗಡೆ ಸಂಬಂಧ ಪಟ್ಟಿರಿವುದರಿಂದ ನೀವು ಹಿಡಕಲ ಜಲಾಷಯದ ಮುಳುಗಡೆ ಕುಟುಂಬಗಳ ಮಾಹಿತಿಯನ್ನು ವಿಶೇಷ ಭೂ ಸ್ವಾದೀನ ಅಧಿಕಾರಿಗಳು ಹಿಡಕಲ್ ಡ್ಯಾಂ ಇವರಿಂದ ಪಡೆಯಬಹುದಾಗಿದೆ. ಎಂದು ತಿಳಿಸಿ ಕೈ ತೊಳೆದು ಕೊಂಡಿದ್ದಾರೆ. ಭೂಸ್ವಾದೀನ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದ್ದಕ್ಕೆ ಈ ಜಮೀನಿನ ಕುರಿತ ಆದೇಶ ಪತ್ರಗಳು ಗೆದ್ದಲು ಹುಳುಗಳು ತಿಂದು ನಾಶವಾಗಿವೆ ಎಂದು ಉತ್ತರಿಸಿದ್ದಾರೆ. ಅಧಿಕಾರಿಗಳ ಈ ಉತ್ತರ ಭ್ರಷ್ಟಾಚಾರದ ಅನುಮಾನವನ್ನು ದಟ್ಟವಾಗಿಸಿದೆ.
ಆದರೆ 20-11-1976 ಭೂಮಿಪಡೆಯುವ ಫಲಾನಿಭವಿಗಳ ಪಟ್ಟಿಯಲ್ಲಿ ಈ 7 ಜನರ ಹೆಸರುಗಳೇ ಇರಲಿಲ್ಲ. ಹಾಗಾದರೆ ಈ ಒಂದೆ ಕುಟುಂಬದ ವ್ಯಕ್ತಿಗಳ ಹೆಸರು ಎಲ್ಲಿಂದ ಬಂದಿದೆ ಅಂತಾ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪಾ ಗಡಾದ್ ಅವರ ಪ್ರಶ್ನೆ. ಉನ್ನತಾಧಿಕಾರ ತನಿಖೆ ನಂತರವೇ ಸತ್ಯ ಬಯಲಾಗಲಿದೆ.