ಬ್ರಾಹ್ಮಣೇತರರನ್ನು ಅರ್ಚಕರಾಗಿ ನೇಮಿಸಲು ಸರ್ಕಾರ ಚಿಂತನೆ
ಬೆಳಗಾವಿ, ನವೆಂಬರ್, 24: ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ದೇವಸ್ಥಾನಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರನ್ನು ಅರ್ಚಕರಾಗಿ ನೇಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತಂತೆ ಬುಧವಾರ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇಮಾಭಿವೃದ್ಧಿ ಸಮಿತಿಯ ಆರನೇ ವಾರ್ಷಿಕ ವರದಿಯನ್ನು ಸದನಕ್ಕೆ ಸಲ್ಲಿಸಲಾಯಿತು.
ಪ್ರಮುಖ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರನ್ನೂ ಸಹ ಅರ್ಚಕ ವೃತ್ತಿಗೆ ನೇಮಿಸಿಕೊಳ್ಳಬೇಕು ಮತ್ತು ಮೇಲ್ಜಾತಿಯವರು ಮಾತ್ರ ಅರ್ಚಕರಾಗಿ ಮುಂದುವರಿಯುವುದು ಅಸಾಂವಿಧಾನಿಕ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಎಲ್ಲಾ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಶಾಸಕ ಕೆ.ಶಿವಮೂರ್ತಿ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿತ್ತು.
ದೇವಸ್ಥಾನಗಳಲ್ಲಿ ಬ್ರಾಹ್ಮಣತೇರರನ್ನು ಅರ್ಚಕರಾಗಿ ನೇಮಿಸದೇ ಇರುವುದು ಸಂವಿಧಾನದ ಕಲಂ 14ರ ಉಲ್ಲಂಘಿಸಿದಂತೆ ಎಂದು ಈ ಸಮಿತಿ ವರದಿಯಲ್ಲಿ ತಿಳಿಸಿದೆ.
ಅಷ್ಟೇ ಅಲ್ಲದೆ ಸಂವಿಧಾನದ ಪರಿಚ್ಛೇದ 15 ರ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ ಅಸಮಾನತೆಯನ್ನು ತೋರುವಂತಿಲ್ಲ, ಮತ್ತು ಪರಿಚ್ಛೇಧ 16 ರ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದಾದ್ಯಂತ ಸುಮಾರು 35 ಸಾವಿರ ದೇವಸ್ಥಾನಗಳ ನಿರ್ವಹಣೆಯನ್ನು ಮುಜರಾಯಿ ಇಲಾಖೆ ಹೊತ್ತುಕೊಂಡಿದೆ.
2006ರಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರವೂ ಸಹ ದೇವಸ್ಥಾನಗಳಲ್ಲಿ ಎಲ್ಲಾ ಹಿಂದೂಗಳು ಅರ್ಚಕರಾಗಿ ಸೇವೆ ಸಲ್ಲಿಸಬಹುದು ಎಂದು ಆದೇಶ ಹೊರಡಿಸಿತ್ತು.
ದೇವಸ್ಥಾನಗಳಲ್ಲಿ ಅರ್ಚಕರನ್ನು ನೇಮಿಸಲು ಯಾವುದೇ ರೀತಿಯಲ್ಲೂ ಜಾತಿ ತಾರತಮ್ಯ ಧೋರಣೆ ಅನುಸರಿಸಬಾರದು ಎಂದು 2015ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.