ಮಹಾದಾಯಿ ಬಗ್ಗೆ ಕಾಂಗ್ರೆಸ್ ನಿಲುವು ತಿಳಿಸಿ: ರಾಹುಲ್ ಗೆ ರೈತರ ಆಗ್ರಹ
ಸವದತ್ತಿ (ಬೆಳಗಾವಿ ಜಿಲ್ಲೆ), ಫೆಬ್ರವರಿ 26: ಮಹಾದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಭಾನುವಾರ ರಾತ್ರಿ ಪಾದಚಾರಿ ಮಾರ್ಗದಲ್ಲಿಯೇ (ಫುಟ್ ಪಾತ್) ಮಲಗಿದರು.
ಹೊಸಪೇಟೆಯ ಸಭೆಯಲ್ಲಿ ಮಹಾದಾಯಿ ಬಗ್ಗೆ ಮಾತೇ ಆಡದ ರಾಹುಲ್ ಗಾಂಧಿ
ಈ ವಿಚಾರವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ವೀರೇಶ್ ಸೊಬರದಮಠ ಸ್ವಾಮಿ, ರೈತ ಸೇನಾ ರಾಜ್ಯ ಸಂಚಾಲಕ ಜಯಶಂಕರ್ ವಣ್ಣೂರ್ ಮತ್ತು ಸಮನ್ವಯ ಸಮಿತಿ ಸದಸ್ಯರಾದ ಪಂಚನಗೌಡ್ರ ದ್ಯಾಮನಗೌಡ್ರ ಹಾಗೂ ರೈತರೆಲ್ಲರೂ ಹೋರಾಟದ ಸ್ಥಳವಾದ ಇಲ್ಲಿನ ಎಸ್ ಎಲ್ ಒ ವೃತ್ತದ ಫುಟ್ ಪಾತ್ ಮೇಲೆ ಮಲಗಿದರು.
ಮಹಾದಾಯಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಪಷ್ಟ ನಿಲುವು ತಿಳಿಸಬೇಕು ಎಂದು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸೋಮವಾರ ಎರಡನೇ ದಿನಕ್ಕೆ ಕಾಲಿರಿಸಿತು. ಸವದತ್ತಿ ನಗರಕ್ಕೆ ಬರುತ್ತಿರುವ ರಾಹುಲ್ ಗಾಂಧಿ ಮಹಾದಾಯಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವನ್ನು ಹೇಳಲೇಬೇಕೆಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷರಾದ ವೀರೇಶ್ ಸೊಬರದಮಠ ಸ್ವಾಮಿ ಒತ್ತಾಯಿಸಿದರು.