ರೈತರೇನು ಗೂಂಡಾಗಳೇ, ದೇಶದ್ರೋಹಿಗಳೇ?
ಬೆಳಗಾವಿ,ನವೆಂಬರ್ 21: ಸುವರ್ಣ ಸೌಧದಲ್ಲಿ ಅಧಿವೇಶನ ಪ್ರಾರಂಭವಾಗುವ ಮುನ್ನವೇ 300ರಕ್ಕೂ ಹೆಚ್ಚು ರೈತರನ್ನು ಬಂಧಿಸಿದ್ದು ಸದನದಲ್ಲಿ ಕೆಲವೇಳೆ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿವೇಶನ ಪ್ರಾರಂಭವಾಗುವ ಮುನ್ನವೇ ಬೆಳಗಾವಿಯ ಅಥಣಿ ತಾಲ್ಲೂಕಿನ ಹುಲ್ಯಾಳ ಬಳಿ ನಾಲ್ಕು ಬಸ್ ಮತ್ತು 50ಕ್ಕೂ ಹೆಚ್ಚು ವಾಹನಗಳಲ್ಲಿ ಬರುತ್ತಿದ್ದ ರೈತರನ್ನು ಡಿವೈಎಸ್ ಪಿ ಸತೀಶ್ ಅವರು ತಡೆದು ಬಂಧಿಸಿ ಅಥಣಿಯ ಕಲ್ಯಾಣ ಮಂದಿರದಲ್ಲಿ ಇರಿಸಲಾಗಿದೆ.
ಚಳಿಗಾಲದ ಅಧಿವೇಶನ ಪ್ರಾರಂಭವಾದ ನಂತರ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರೈತರ ಬಂಧನಕ್ಕೆ ಕಿಡಿಕಾರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖಂಡ ಗೋವಿಂದ ಕಾರಜೋಳ ರಾಜ್ಯಕ್ಕೆ ಅನ್ನ ನೀಡುವ ರೈತರು ಗೂಂಡಾಗಳೇ, ದೇಶದ್ರೋಹಿಗಳೇ? ಅವರನ್ನೇಕೆ ಬಂಧಿಸಬೇಕು. ಅಲ್ಲದೆ ಅವರಿನ್ನು ಪ್ರತಿಭಟನೆಗೆ ಮುಂದಾಗಿಯೇ ಇಲ್ಲ ಆಗಲೇ ಅವರನ್ನು ಬಂಧಿಸಿರುವುದು ರಾಜ್ಯದ ಆಕ್ರಮಣಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ರೈತರಿಂದಲೇ ನಾವು ಬದುಕಿರುವುದು ಎಂದಿದ್ದಾರೆ.[ಬೆಳಗಾವಿ ಅಧಿವೇಶನಕ್ಕೆ ಬಿಗಿ ಬಂದೋಬಸ್ತ್]
ಇನ್ನು ಬಿಜೆಪಿ ಮುಖಂಡರು ತೀವ್ರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದು ತುಘಲಕ್ ಸರ್ಕಾರ, ಇಂತಹ ಸರ್ಕಾರವನ್ನು ಎಂದೂ ನೋಡಿಲ್ಲ ಎಂದು ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ.
ಇನ್ನು ಈ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಎಲ್ಲರ ಬಾಯಿ ಮುಚ್ಚಿಸಲು ಮುಂದಾಗಿದ್ದು ಬೆಳಗ್ಗೆಯೇ ಬಿಡುಗಡೆಗೆ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಲವು ಮುಖಂಡರು ಸಿಟ್ಟಿಗೆದ್ದು ಬಂಧನಕ್ಕೊಳಪಡಿಸಿರುವ ರೈತರನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.