ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ತಲೆಮುಡಿ ಕೊಟ್ಟ ಅಭಿಮಾನಿ!
ಬೆಳಗಾವಿ, ಮೇ 17 : ಬೆಂಗಳೂರಿನಲ್ಲಿ ಯಡಿಯೂರಪ್ಪ 24 ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ತಲೆಮುಡಿ ಕೊಟ್ಟು, ಸವದತ್ತಿ ಯಲ್ಲಮ್ಮ ದೇವಿಯ ಹರಕೆ ತೀರಿಸಿ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ರಮೇಶ ಹೂಲಿ ಮುಡಿ ಕೊಟ್ಟ ಅಭಿಮಾನಿ. ಯಡಿಯೂರಪ್ಪ ಸಿಎಂ ಆದ್ರೆ ಮುಡಿ ಕೊಡ್ತಿನಿ ಅಂತ ರಮೇಶ್ ಹರಕೆ ಹೊತ್ತಿದ್ದರಂತೆ. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಭಿಮಾನಿ ತನ್ನ ಹರಕೆ ತೀರಿಸಿದ್ದಾರೆ.
ಬಿಎಸ್ ವೈ ಅಭಿಮಾನಿಗಳಿಂದ ರಾಜ್ಯಾದ್ಯಂತ ವಿಜಯೋತ್ಸವ ಆಚರಣೆ
ಅಭಿಮಾನಿ ತನ್ನ ಮುಡಿ ಕೊಡುವ ಮೂಲಕ ಯಡಿಯೂರಪ್ಪ ಸಿಎಂ ಆಗಿದ್ದನ್ನು ಸಂಭ್ರಮಿಸಿದರೆ, ಅವರ ಕಾರ್ಯಕರ್ತರು ಬೆಳಗಾವಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.
ಆದರೆ ನಿಷೇಧಾಜ್ಞೆ ಹಿನ್ನೆಲೆ ಪೊಲೀಸರು ವಿಜಯೋತ್ಸವಕ್ಕೆ ಅವಕಾಶ ನೀಡಿಲ್ಲ. ಮೊನ್ನೆ ಬೆಳಗಾವಿಯಲ್ಲಿ ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದಿತ್ತು. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದೆ.