ನಕಲಿ ಛಾಪಾಕಾಗದ ಹಗರಣ, ಇನ್ನೂ ಸಿಕ್ಕಿಲ್ಲ ಬಹುಮಾನದ ಹಣ!
ಬೆಳಗಾವಿ, ಅಕ್ಟೋಬರ್ 26 : ಬಹುಕೋಟಿ ರೂಪಾಯಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲ್ ತೆಲಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೆಲಗಿಗೆ ಚಿಕಿತ್ಸೆ ಮುಂದುವರೆದಿದೆ.
17 ವರ್ಷಗಳು ಕಳೆದರೂ ಕರೀಂ ಲಾಲ್ ತೆಲಗಿಯನ್ನು ಹಿಡಿಯಲು ಸಹಾಯ ಮಾಡಿದ ಬೆಳಗಾವಿ ಮೂಲದ ಜಯಂತ ತಿನೇಕರರಿಗೆ ಕೇಂದ್ರ ಸರ್ಕಾರದಿಂದ 44 ಕೋಟಿ ಬಹುಮಾನದ ಹಣ ಸಿಕ್ಕಿಲ್ಲ. ಇಂದು ಮಾಧ್ಯಮಗಳ ಮುಂದೆ ಹಗರಣದ ಬಗ್ಗೆ ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ನಿಧನ
ಮೊದಲು ಬೆಳಗಾವಿಯ ಖಾನಾಪುರ ರೈಲು ನಿಲ್ದಾಣದಲ್ಲಿ ಕರೀಂ ಲಾಲ್ ತೆಲಗಿ ಹಲಸಿನ ಹಣ್ಣು ಮಾರುತ್ತಿದ್ದ. ಮುಂದೆ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಆದನು. ಖಾನಾಪುರದಲ್ಲಿ ಆತ ಆಸ್ತಿ ಮಾಡುವುದನ್ನು ನೋಡಿ ಅನುಮಾನಗೊಂಡ ಜಯಂತ ತಿನೇಕರ ಅವರು ಪರಿಶೀಲಿಸಿದಾಗ ತೆಲಗಿ 17 ರಾಜ್ಯಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದು ಗೊತ್ತಾಗಿತ್ತು.
ತಕ್ಷಣವೇ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಾಂಗ್ಲಿಯಾನ ಅವರಿಗೆ ಜಯಂತ ತಿನೇಕರ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ತೆಲಗಿಯನ್ನು ರಾಜಸ್ಥಾನದ ಅಜ್ಮೀರ್ ದರ್ಗಾದಲ್ಲಿ ಬಂಧಿಸಲಾಗುತ್ತದೆ. 2001ರಿಂದ ತೆಲಗಿಯನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ಜಯಂತ ತಿನೇಕರ.
'ಈ ಬಹುಕೋಟಿ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳಾದ ಎಸ್.ಎಂ.ಕೃಷ್ಣ ಮತ್ತು ವಿಲಾಸ್ ರಾವ್ ದೇಶಮುಖ್ ಸೇರಿದಂತೆ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದೆ. ಇದರಿಂದ ಜೀವ ಬೆದರಿಕೆ ಎದುರಿಸುತ್ತಿದ್ದೇನೆ. ಯಾವುದೇ ಕಾರಣವಿಲ್ಲದೇ ನನಗೆ ನೀಡಿದ ಭದ್ರತೆಯನ್ನು ಹಿಂಪಡೆಯಲಾಗಿದೆ' ಎಂದು ಜಯಂತ ತಿನೇಕರ ಹೇಳಿದ್ದಾರೆ.
'ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆರ್.ವಿ.ದೇಶಪಾಂಡೆ ಅವರ ವಿರುದ್ಧ ಧ್ವನಿ ಎತ್ತಿದಕ್ಕೆ ನನಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಲಾಗಿದೆ' ಎಂದು ತಿನೇಕರ ಆರೋಪಿಸಿದ್ದಾರೆ.