ಖಾನಾಪುರದ ಅರಣ್ಯಕ್ಕೆ ಅನುಮತಿ ಇಲ್ಲದೆ ಪ್ರವೇಶವಿಲ್ಲ
ಖಾನಾಪುರ, ಏಪ್ರಿಲ್ 13 : ಖಾನಾಪುರ ತಾಲೂಕಿನಲ್ಲಿರುವ ಸಂರಕ್ಷಿತ ಅರಣ್ಯದೊಳಗೆ ಅನುಮತಿ ಇಲ್ಲದೆ ಪ್ರವಾಸಿಗರು ಪ್ರವೇಶ ಮಾಡುವುದನ್ನು ರಾಜ್ಯ ಅರಣ್ಯ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿದೆ.
ತಾಲೂಕಿನಲ್ಲಿರುವ ಭೀಮಗಢ ಸಂರಕ್ಷಿತ ಅರಣ್ಯದೊಳಗೆ ಅನುಮತಿ ಇಲ್ಲದೆ ಪ್ರವೇಶ ಮಾಡಿ, ಅರಣ್ಯದ ಪ್ರಶಾಂತತೆಗೆ ಧಕ್ಕೆ ತರುತ್ತಿದ್ದ ಪ್ರವಾಸಿಗರನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನಿಷೇಧ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಹೇಳಿದೆ.
ಭೀಮಗಢ ಅರಣ್ಯದಲ್ಲಿರುವ ಅಪೂರ್ವ ಸಸ್ಯ ಸಂಪತ್ತು ಮತ್ತು ವನ್ಯಮೃಗಗಳಿಗೆ ಧಕ್ಕೆಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಆದೇಶ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಸದ್ಯಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಹಳ್ಳಿಗರು ಮಾತ್ರ ಇಲ್ಲಿ ಪ್ರವೇಶಿಸಬಹುದು. [ಪುಣ್ಯಕೋಟಿ ಕೊಂದ ಹುಲಿ ಭೀಮಗಡದಿಂದ ಸ್ಥಳಾಂತರ?]
ಅರಣ್ಯದೊಳಗೆ ಪ್ರವೇಶಿಸುತ್ತಿದ್ದ ಕೆಲ ಪ್ರವಾಸಿಗರು ಹುಚ್ಚುಚ್ಚಾಗಿ ಕಿರುಚಾಡುತ್ತ, ತಾವು ತಂದಿದ್ದ ವಸ್ತುಗಳನ್ನು ಸಿಕ್ಕಲ್ಲಿ ಬಿಸಾಡುತ್ತ ಅಸಭ್ಯವಾಗಿ ವರ್ತಿಸುತ್ತಿದ್ದರು. ಹಲವಾರು ಪ್ರದೇಶಗಳಲ್ಲಿ ಒಡೆದ ಬಾಟಲುಗಳು, ಮದ್ಯದ ಶೀಷೆಗಳು ಕೂಡ ಸಿಕ್ಕಿವೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ, ಪಶ್ಚಿಮ ಘಾಟಿಗೆ ಹೊಂದಿಕೊಂಡಿರುವ ಭೀಮಗಢ ಅಭಯಾರಣ್ಯ ಬರುತ್ತದೆ. ಹಲವಾರು ಗುಹೆಗಳಿರುವ ಈ ಪ್ರದೇಶದಲ್ಲಿ, ಅಳಿವಿನಂಚಿನಲ್ಲಿರುವ ಉದ್ದ ಬಾಲವಿರುವ ವಿಶಿಷ್ಟ ಬಗೆಯ ಬಾವಲಿಗಳು ನೆಲೆಸಿರುವುದು ವಿಶೇಷ.
17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ನಿರ್ಮಿಸಿರುವ ಭೀಮಗಢ ಕೋಟೆಯಿಂದಾಗಿ ಈ ಪ್ರದೇಶಕ್ಕೆ ಭೀಮಗಢ ಅರಣ್ಯ ಎಂದು ಹೆಸರು ಬಂದಿದೆ. 2011ರ ಡಿಸೆಂಬರ್ ತಿಂಗಳಲ್ಲಿ ಈ ಕಾಡನ್ನು ಅಭಯಾರಣ್ಯವೆಂದು ರಾಜ್ಯ ಸರಕಾರ ಘೋಷಿಸಿತು.