ಬರ ಪರಿಹಾರ ಕಾಮಗಾರಿಗಳಿಗೆ ರು. 254 ಕೋಟಿ ಬಿಡುಗಡೆ
ರಾಜ್ಯದ ಬರಪೀಡಿತ ತಾಲೂಕುಗಳ ಬರ ಪರಿಹಾರಕ್ಕಾಗಿ ಬೆಳಗಾವಿ ಅಧಿವೇಶನದ ಪ್ರಶ್ನೋತ್ತರ ಕಾರ್ಯಕ್ರಮ ವೇಳೆ ಮಾತನಾಡಿದ ಕಾಗೋಡು ತಿಮ್ಮಪ್ಪ ಬರಪರಿಹಾರವನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗಾಗಿ ರು. 254ಕೋಟಿ ಬಿಡುಗಡೆ ಮಾಡಲಾಗಿದೆ ಸಮೀಕ್ಷೆಗನುಗುಣವಾಗಿ ಆಯಾ ಜಿಲ್ಲಾಡಳಿತದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.[ಕಂದಾಯ ಖಾತೆ ಸಿಕ್ಕರೆ ತುಂಬಾ ಸಂತೋಷ: ಕಾಗೋಡು ತಿಮ್ಮಪ್ಪ]
ಬರ ಪರಿಹಾರ ಕಾಮಗಾರಿಗಳ ಕುರಿತು ಶಾಸಕ ಯು.ಬಿ.ಬಣಕಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುರ್ತು ಕುಡಿಯುವ ನೀರು ಪೂರೈಕೆ. ಜಾನುವಾರು ಸಂರಕ್ಷಣೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಸೂಚನೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರು. 1903.93ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಬರ ಪರಿಹಾರ ಕಾರ್ಯಗಳಿಗೆ ರು. 4702.54ಕೋಟಿ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದ ಅಂತರ್ ಇಲಾಖಾ ಅಧಿಕಾರಿಗಳ ತಂಡ ನವೆಂಬರ್ 2 ರಿಂದ 5ರವರೆಗೆ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ಮಾಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿದೆ ಎಂದು ಹೇಳಿದರು.