ಕಪಾಳಕ್ಕೆ ಬಿಗಿಸಿಕೊಂಡು ಕ್ಷಮೆ ಕೇಳಿಸಿಕೊಂಡಂತಾಗಿದೆ!
ಬೆಂಗಳೂರು, ಆಗಸ್ಟ್ 31 : ಕಪಾಳಕ್ಕೆ ಹೊಡೆಸಿಕೊಂಡು ನಂತರ ಕ್ಷಮೆ ಕೇಳಿಸಿಕೊಂಡ ಸ್ಥಿತಿ ಕನ್ನಡಿಗರದ್ದಾಗಿದೆ. ಇದನ್ನು ಇಲ್ಲಿಗೇ ಬಿಡಬೇಕಾ ಅಥವಾ ಇತ್ಯರ್ಥವಾಗುವವರೆಗೆ ಹೋರಾಟ ನಡೆಸಬೇಕಾ ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಕನ್ನಡ ಹೋರಾಟಗಾರರು ಕೇಳಿಕೊಳ್ಳಬೇಕಾದ ಪ್ರಶ್ನೆ.
ಕೊನೆಗೂ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಕನ್ನಡ ಮಣ್ಣಿನ ಮೇಲೆಯೇ ನಿಂತುಕೊಂಡು 'ಮಹಾರಾಷ್ಟ್ರಕ್ಕೆ ಜೈ' ಎಂದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ಲಿಂಗಾಯತ ಪಂಗಡಕ್ಕೆ ಸೇರಿದ, ಎರಡು ಚುನಾವಣೆಗಳನ್ನು ಸೋತ 39 ವರ್ಷ ಗಟ್ಟಿಗಿತ್ತಿಯನ್ನು 24 ಗಂಟೆಗಳಲ್ಲಿ ಕಿತ್ತುಹಾಕದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಅಬ್ಬರಿಸಿದ್ದಾರೆ.
ಪಕ್ಷಕ್ಕೆ ಧಕ್ಕೆಯಾಗುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಿರುವಾಗ, ಡಿಕೆ ಶಿವಕುಮಾರ್ ಸೇರಿದಂತೆ ಉಳಿದೆಲ್ಲ ಕಾಂಗ್ರೆಸ್ ನಾಯಕರು ಬಾಯಿಮುಚ್ಚಿಕೊಂಡು ಕುಳಿತಿರುವಾಗ ಲಕ್ಷ್ಮಿಯನ್ನು ಕಿತ್ತುಹಾಕುವಂಥ ಕ್ರಮವನ್ನು ನಿರೀಕ್ಷಿಸಲು ಸಾಧ್ಯವೆ?
ಸದಾ ವಿವಾದಕ್ಕೆ ಅಂಟಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಯಾರು?
ಇದ್ದುದರಲ್ಲಿಯೇ ಸ್ವಲ್ಪ ಧೈರ್ಯ ತೆಗೆದುಕೊಂಡು, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಾನ ಮರ್ಯಾದೆ ಇದ್ದರೆ ಕಿತ್ತಿ ಬಿಸಾಡಿ
ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಮಾನ ಮರ್ಯಾದೆಯೇನಾದರೂ ಇದ್ದರೆ ಕನ್ನಡ, ಕರ್ನಾಟಕ ವಿರೋಧಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಬಿಸಾಡಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೊಳಿಸಲು 24 ಗಂಟೆ ಗಡುವು ನೀಡಿದ ವಾಟಾಳ್
ಎಲ್ಲಿಯೂ ಕ್ಷಮೆ ಯಾಚಿಸಿಲ್ಲ ಲಕ್ಷ್ಮೀ
ರಾಜ್ಯಕ್ಕೆ ರಾಜ್ಯವೇ ತಿರುಗಿಬಿದ್ದ ಮೇಲೆ ಆಂಗ್ಲ ಭಾಷೆಯಲ್ಲಿ ಪತ್ರಿಕಾಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಆ ರೀತಿ ಹೇಳುವ ಅಗತ್ಯವಿರಲಿಲ್ಲ. ಆದರೆ, ನಾನು ಕರ್ನಾಟಕಕ್ಕೆ ದ್ರೋಹ ಬಗೆಯುವ ಯಾವ ಹೇಳಿಕೆಯನ್ನೂ ನೀಡಿಲ್ಲ. ನನ್ನ ಹೇಳಿಕೆಯನ್ನು ನನಗೆ ಅಗೌರವ ತರಬೇಕೆಂದೇ ತಿರುಚಿ ಹೇಳಲಾಗಿದೆ ಎಂದು ತಿಪ್ಪೆ ಸಾರಿದ್ದಾರೆ. ಆದರೆ, ಆ ಪತ್ರಿಕಾ ಹೇಳಿಕೆಯಲ್ಲಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆಯೇ ಹೊರತು ಎಲ್ಲಿಯೂ ಕ್ಷಮೆ ಯಾಚಿಸಿಲ್ಲ.
ಸ್ವಾಭಿಮಾನಿ ಕನ್ನಡಿಗರು ಸುಮ್ಮನೆ ಬಿಟ್ಟಾರೆಯೆ?
ಏನೇ ಆಗಲಿ, ಸ್ವಾಭಿಮಾನಿ ಕನ್ನಡಿಗರು ಸುಮ್ಮನೆ ಬಿಟ್ಟಾರೆಯೆ? ಕರ್ನಾಟಕದ ನೆಲ ಜಲ ಬಳಸಿ ಸಕ್ಕರೆ ಕಾರ್ಖಾನೆ ನಡೆಸುವ ಈ ಮಹಿಳೆಗೆ, ಕರ್ನಾಟಕವೀಗ ರಸವಿಲ್ಲದ ಕಬ್ಬಿನ ಜಲ್ಲೆಯ ರೀತಿ ಕಂಡಿದ್ದರೆ ಆಶ್ಚರ್ಯವಿಲ್ಲ ಎಂದು ರಸ ಬರಿದಾಗುವಂತೆ ಹಿಂಡಿ ಹಿಪ್ಪೆ ಮಾಡಿದ್ದಾರೆ. ನೀವು ನೆಗೆದುಬಿದ್ರೆ ಮೊದಲು ಹೂವಿನಹಾರ ನಾನೇ ಹಾಕುತ್ತೇನೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
"ಮಹಾರಾಷ್ಟ್ರದ ಧ್ವಜಕ್ಕೆ ಜೈಕಾರ ಹಾಕುವವರು ಮಹಾರಾಷ್ಟ್ರಕ್ಕೇ ಹೋಗಲಿ!"
ಲಕ್ಷ್ಮಿಯನ್ನು ಗಡಿಪಾರು ಮಾಡದಿದ್ದರೆ...
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕದಿಂದ ಕೂಡಲೇ ಗಡಿಪಾರು ಮಾಡಿ, ಇಲ್ಲವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಕರ್ನಾಟಕದಿಂದ ಗಡಿಪಾರು ಮಾಡಬೇಕಾಗುತ್ತದೆ ಎಂದು ಕುಮಾರ್ ಗೌಡ ಎಂಬುವವರು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಮುಕ್ತವಾದಾಗ ಜೈ ಕರ್ನಾಟಕ ಅನ್ನುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ ಎಂದು ಮಹಾವೀರ್ ಎಂಬುವವರು ಎಚ್ಚರಿಸಿದ್ದಾರೆ.
ಮರಾಠಿಗರನ್ನು ಸೆಳೆಯುವ ಹವಣಿಕೆಯಲ್ಲಿ ಲಕ್ಷ್ಮೀ
ಯಾವಾಗಲೂ ಸುದ್ದಿಯಲ್ಲೇ ಇರಬಯಸುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಗ್ರಾಮೀಣ ಪ್ರದೇಶದ ಜನರನ್ನು ಸೆಳೆಯುವ ಉದ್ದೇಶದಿಂದ ಹೀಗೆ ಹೇಳಿರುವುದರಲ್ಲಿ ಅಚ್ಚರಿಯೇನಿಲ್ಲ. ಈಗಾಗಲೇ ಎರಡು ಚುನಾವಣೆಯಲ್ಲಿ ಸೋತಿರುವ ಅವರು, ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಹವಣಿಕೆಯಲ್ಲಿರುವುದು ನಿಚ್ಚಳವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇನೆಯ ನೂರಾರು ಕಾರ್ಯಕರ್ತರು ಮೈಸೂರು ಬ್ಯಾಂಕ್ ಬಳಿ ಜಮಾಯಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಮಹಾರಾಷ್ಟ್ರಕ್ಕೆ ಜೈ ಅನ್ನುವವಳು ನಾನೇ ಮೊದಲು ಅಂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂದಿನಂತೆ ಧಿಕ್ಕಾರ ಕೂಗಿದರು. ಇವರ ಪ್ರತಿಭಟನೆ, ಹೋರಾಟ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗಡಿಪಾರು ಮಾಡುವವರೆಗೆ ಮುಂದುವರಿಯುವುದೆ?