ಹುತಾತ್ಮ ಯೋಧ ಬಸಪ್ಪನಿಗೆ ಬೈಲೂರಿನಲ್ಲಿ ಅಂತಿಮ ನಮನ
ಬೆಳಗಾವಿ, ಏಪ್ರಿಲ್ 05 : ಉಗ್ರರ ದಾಳಿಯಿಂದ ತೀವ್ರವಾಗಿ ಗೊಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಕನ್ನಡ ಮಣ್ಣಿನ ಯೋಧ, ಬಸಪ್ಪ ಬಜಂತ್ರಿ ಅವರ ಅಂತ್ಯ ಸಂಸ್ಕಾರವನ್ನು ಅವರ ತವರೂರು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೈಲೂರಿನಲ್ಲಿ ಬುಧವಾರ ನೆರವೇರಿಸಲಾಯಿತು.
ಬುಧವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಪಂತ್ ಚೌಕ್ ನಲ್ಲಿ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ 5 ಯೋಧರಲ್ಲಿ ಸಿಆರ್ಪಿಎಫ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಬಸಪ್ಪ ಬಜಂತ್ರಿ ಕೂಡ ಒಬ್ಬರಾಗಿದ್ದರು. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಕೂಡ ಗಾಯಗೊಂಡಿದ್ದರು.[ಖಾನಾಪುರದ ಬಸಪ್ಪ ಬಜಂತ್ರಿ ಶ್ರೀನಗರದಲ್ಲಿ ಹುತಾತ್ಮ]
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಬುಧವಾರ ಸಂಜೆ ಕೊನೆಯುಸಿರೆಳೆದರು. ಶ್ರೀನಗರದಲ್ಲಿ ನಡೆಯಲಿರುವ ಉಪಚುನಾವಣೆಯ ನಿಮಿತ್ತ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.[ಸಿಆರ್ ಪಿಎಫ್ ಮೇಲೆ ಉಗ್ರರ ದಾಳಿ, ಓರ್ವನ ಸಾವು, ಐವರಿಗೆ ಗಾಯ]
ಅವರ ಸಾವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ವೀರಯೋಧ ಬಸಪ್ಪ ಬಜಂತ್ರಿಯವರು ಶ್ರೀನಗರದ ಸೆಂಪೋರದಲ್ಲಿ ಉಗ್ರರ ದಾಳಿ ವೇಳೆ ಹುತಾತ್ಮರಾಗಿದ್ದಾರೆ. ಅವರ ದುಃಖತಪ್ತ ಕುಟುಂಬವರ್ಗಕ್ಕೆ ಸಾಂತ್ವನಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಸಪ್ಪ ಬಜಂತ್ರಿ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಪೊಲೀಸ್ ಇಲಾಖೆ ಮೂರು ಸುತ್ತು ಗುಂಡು ಹಾರಿಸಿ, ಬಂದೂಕು ತಲೆಕೆಳಗೆ ಮಾಡಿ ಮೌನ ಆಚರಿಸಿತು. ಅಂತಿಮ ಸಂಸ್ಕಾರದಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿ ಹುತಾತ್ಮನಾದ ಯೋಧನಿಗಾಗಿ ಕಂಬನಿ ಮಿಡಿದರು.