ರೈತರಿಗೆ ಡಿ ಕೆ ಶಿವಕುಮಾರ್ ಎಳನೀರು ಕುಡಿಸಿಬಿಟ್ರೆ ಲೀಡರ್ ಆಗ್ ಬಿಡ್ತಾರಾ?
ಪ್ರತಿಭಟನೆ ಮಾಡುತ್ತಿರುವ ರೈತರ ಬಳಿಬಂದು, ಎಳನೀರು, ಶರಬತ್ತು ಕುಡಿಸಿಬಿಟ್ಟರೆ, ಯಾರೂ ಜನನಾಯಕರಾಗುವುದಿಲ್ಲ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ, ಸತೀಶ್ ಜಾರಕಿಹೊಳಿ ತಮ್ಮದೇ ಪಕ್ಷದ ಮುಖಂಡ, ಜನಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಗೆ ಟಾಂ
ಬೆಳಗಾವಿ, ಡಿ 1: ಪ್ರತಿಭಟನೆ ಮಾಡುತ್ತಿದ್ದ ರೈತರ ಬಳಿಬಂದು, ಎಳನೀರು, ಶರಬತ್ತು ಕುಡಿಸಿಬಿಟ್ಟರೆ, ಯಾರೂ ಜನನಾಯಕರಾಗುವುದಿಲ್ಲ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ, ಸತೀಶ್ ಜಾರಕಿಹೊಳಿ ತಮ್ಮದೇ ಪಕ್ಷದ ಮುಖಂಡ, ಜನಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಶನಿವಾರ (ಡಿ 1) ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿ ಕೆ ಶಿವಕುಮಾರ್ ಒಬ್ಬರಿಗೂಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ ಎಂದಿದ್ದಾರೆ. (ಡಿಕೆಶಿ ಸಂಧಾನ ಯಶಸ್ವಿ, ಕಬ್ಬು ಬೆಳೆಗಾರರ ಪ್ರತಿಭಟನೆ ವಾಪಸ್)
ಇವರು ನಡುವಿನ ಮನಸ್ತಾಪವನ್ನು ಇಟ್ಟುಕೊಂಡು, ನಾನು ರಾಜಕೀಯ ಮಾಡುವುದಕ್ಕೆ ಹೋಗುವುದಿಲ್ಲ. ಅವರೆಲ್ಲಾ ಒಂದೇ ದೋಣಿಯ ನಾವಿಕರು ಎಂದು ಸತೀಶ್ ಜಾರಕಿಹೂಳಿ ಲೇವಡಿ ಮಾಡಿದ್ದಾರೆ.
ಸಚಿವ ಡಿ ಕೆ ಶಿವಕುಮಾರ್, ಪ್ರತಿಭಟನೆ ಮಾಡುತ್ತಿದ್ದ ರೈತರ ಮನವೊಲಿಸಿ, ಅವರಿಗೆ ಎಳನೀರು ಕುಡಿಸಿ, ಪ್ರತಿಭಟನೆ ಕೈಬಿಡುವಂತೆ ಮಾಡಿದ್ದರು. ಈ ಘಟನೆಯನ್ನು ಪ್ರಸ್ತಾವಿಸಿದ ಸತೀಶ್, ರೈತರ ಮನವೊಲಿಸುವುದು ಅವರ ಕರ್ತವ್ಯ. ಅದನ್ನು ಅವರು ಮಾಡಿದ್ದಾರೆ. ಎಳನೀರು ಕುಡಿಸಿಬಿಟ್ರೆ ಲೀಡರ್ ಆಗ್ ಬಿಡ್ತಾರಾ ಎಂದು ಸತೀಶ್, ಮಾಧ್ಯಮದವರನ್ನು ಮರು ಪ್ರಶ್ನಿಸಿದ್ದಾರೆ.
ರಮೇಶ್ ಮತ್ತು ಡಿಕೆಶಿ ನಡುವೆ ಯಾವ ಕಾರಣಕ್ಕಾಗಿ ಮನಸ್ತಾಪ ಉಂಟಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಬೆಳಗಾವಿ PLD ಬ್ಯಾಂಕ್ ವಿಚಾರದಲ್ಲಿ ರಮೇಶ್ ಅವರೇ ಮಧ್ಯಸ್ಥಿಕೆಗೆ ಬಂದರು. ಆದರೆ ಡಿಕೆ ಶಿವಕುಮಾರ್ ಹಾಗೂ ರಮೇಶ್ ಮುನಿಸಿಗೂ PLD ಬ್ಯಾಂಕಿನ ಚುನಾವಣೆಗೂ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. (ಸಮ್ಮಿಶ್ರ ಸರ್ಕಾರದಿಂದ ಅನುದಾನವೇ ಬರುತ್ತಿಲ್ಲ)
ಒಂದೇ ಪರಿವಾರದಲ್ಲಿರುವ ರಮೇಶ್, ಡಿಕೆಶಿ, ಹೆಬ್ಬಾಳ್ಕರ್ ಅವರವರೆ ಹೊಡೆದುಕೊಳ್ಳುತ್ತಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಸರಕಾರ ಅಧಿಕಾರಕ್ಕೆ ಬಂದಿದೆ. ನಾನು ಇಂತಹ ಘಟನೆಗಳಿಗೆ ಸಪೋರ್ಟ್ ಮಾಡುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟ ಪಡಿಸಿದ್ದಾರೆ.