ದೇವದಾಸಿ ಪದ್ಧತಿ ನಿರ್ಮೂಲನೆಗೆ ಹೋರಾಡುವೆ: ನಟ ಚೇತನ್
ಬೆಳಗಾವಿ, ಮೇ 21 : ನಾನು ಸಮಾಜಮುಖಿ ಕೆಲಸಗಳಲ್ಲಿ ಸಕ್ರೀಯವಾಗುತ್ತಿದ್ದೇನೆ. ಮುಖ್ಯವಾಗಿ ದೇವದಾಸಿ ಪದ್ಧತಿ. ಈ ಪದ್ಧತಿಯಿಂದ ಸಮಾಜದಲ್ಲಿ ಸಾಕಷ್ಟು ತೊಂದರೆಗಳಿವೆ. ಹೀಗಾಗಿ ಇದರ ನಿರ್ಮೂಲನೆಗಾಗಿ ನಾನು ಹೋರಾಟ ಮುಂದುವರಿಸುತ್ತಿದ್ದೇನೆ ಎಂದು 'ಆ ದಿನಗಳು' ಖ್ಯಾತಿಯ ಚಿತ್ರ ನಟ ಚೇತನ್ ಹೇಳಿದರು.
ಈ ವಿಚಾರವಾಗಿ ಮಾಧ್ಯಮಗಳ ಜೊತೆ ಇಂದು ಸೋಮವಾರ ಮಾತನಾಡಿದ ಅವರು ದೇವದಾಸಿ ಪದ್ಧತಿ ಪೀಡಿತರ ಮುಂದಿನ ಜೀವನ ಇನ್ನೂ ಸ್ಪಷ್ಟವಾಗಿಲ್ಲ. ಅವರ ವೈವಾಹಿಕ ಭವಿಷ್ಯದ ಸಮಸ್ಯೆಗಳು ಇನ್ನೂ ಹಾಗೆ ಇವೆ ಎಂದು ವಿಷಾದವ್ಯಕ್ತಪಡಿಸಿದರು.
ಲಿಂಗಾಯತರನ್ನು ಒಡೆದಿದ್ದು ಬಿಎಸ್ ವೈ ಎಂದ ನಟ ಚೇತನ್ ವಿರುದ್ಧ ಪ್ರತಿಭಟನೆ
ಈ ದಿಸೆಯಲ್ಲಿ ಸಿತವ್ವಾ ವಡ್ರಟ್ಟಿ ಅಂತವರೊಂದಿಗೆ ನಾವು ಕೂಡಿಕೊಂಡು ಮುಂದಿನ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇನ್ನು ನಾವು ನಮ್ಮ ಹೋರಾಟವನ್ನು ರಾಜಕೀಯ ಬಿಟ್ಟು ಮುಂದುವರಿಸಬೇಕಾಗಿದೆ.
ಎಲ್ಲರೂ ಬಸವಣ್ಣನವರ ಆದರ್ಶದ ಬಗ್ಗೆ ಮಾತನಾಡುತ್ತಾರೆ. ಆದರೆ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಸ್ಪಂದಿಸುತ್ತಿಲ್ಲ. ಎಷ್ಟು ಜನ ಲಿಂಗಾಯತ ಶಾಸಕರು ಹಾಗೂ ಸಂಸದರು ಇದ್ದಾರೆ. ಇವರುಗಳ ಪ್ರಯತ್ನದಿಂದ ಕೇಂದ್ರದಿಂದ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯ ಕೊಡಿಸಲಿ ಎನ್ನುವುದೇ ನಮ್ಮ ಆಶಯ ಎಂದು ತಿಳಿಸಿದರು.