ಬೆಳಗಾವಿ: 'ಕೊಲ್ಲಲು ಸಿದ್ಧರಾಗಿ' ಎಂದವನ ವಿರುದ್ಧ ಕೇಸ್
ಬೆಳಗವಿ, ಡಿಸೆಂಬರ್ 19: ಕೋಮು ಗಲಭೆಗಳಿಂದ ದೂರವಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಕೋಮು ದ್ವೇಷವನ್ನು ಬಿತ್ತುವ ಕಾರ್ಯ ನಿಧಾನಕ್ಕೆ ಆರಂಭವಾದಂತೆ ಕಾಣುತ್ತಿದೆ.
ಹಿಂದೂಗಳು ಖಡ್ಗ ಇಟ್ಟುಕೊಳ್ಳಿ, ಧರ್ಮ ಉಳಿಸಲು ಕೊಲ್ಲಿ: ರಾಜಾಸಿಂಗ್
ಇತ್ತೀಚೆಗಷ್ಟೆ ತೆಲಂಗಾಣದ ಶಾಸಕ ರಾಜಾಸಿಂಗ್ ಯಾದಗಿರಿಯಲ್ಲಿ ಕೋಮು ದ್ವೇಷ ಹೆಚ್ಚಿಸುವ ಹೇಳಿಕೆ ನೀಡಿ ರಾಜ್ಯ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು ಆ ಘಟನೆಯ ನೆನಪು ಆರುವ ಮುಂಚೆಯೇ ಬೆಳಗಾವಿಯಲ್ಲಿ ಆರ್.ಎಸ್.ಎಸ್ ಮುಖಂಡರೋರ್ವರು ಕೋಮು ಸೌಹಾರ್ಧ ಕೆಡಿಸುವ ದ್ವೇಷದ ಹೇಳಿಕೆಯನ್ನು ನೀಡಿದ್ದಾರೆ.
ಆರ್.ಎಸ್.ಎಸ್ ಮುಖಂಡ ರಾಮಚಂದ್ರ ಎಡಕೆ ಅವರು ನಗರದಲ್ಲಿ ವಿಎಚ್ಪಿ ಹಮ್ಮಿಕೊಂಡಿದ್ದ ಪರೇಶ್ ಮೇಸ್ತ ಕೊಲೆ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ 'ಕೊಲೆಗೆ, ಕೊಲೆಯ ಮೂಲಕ ಉತ್ತರ ನೀಡಲು ಸಿದ್ದರಾಗಿ' ಎಂದು ಹೇಳುವ ಮೂಲಕ ಕೋಮು ದ್ವೇಷ ಬಿತ್ತುವ ಕಾರ್ಯ ಮಾಡಿದ್ದರು. ಯುವಕರಿಗೆ ಕೊಲೆ ಮಾಡುವಂತೆ ಪ್ರಚೋದನೆ ನೀಡಿದ್ದರು.
ಹೇಳಿಕೆ ವಿಷಯ ತಿಳಿಯುತ್ತಿದ್ದಂತೆ ಚುರುಕಾದ ಖಡೇಬಜಾರ್ ಪೊಲೀಸರು ರಾಮಚಂದ್ರ ಎಡಕೆ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಪ್ರಚೋದನಾತ್ಮಕ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಐಪಿಸಿ 153(ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.