ಸಿಎಂ ಟೀಕಿಸಿದ್ದ ಸಂಜಯ ಪಾಟೀಲ್ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ, ನವೆಂಬರ್ 10 : 'ನೀವು ಹುಟ್ಟಿರುವುದೋ ಮೈಸೂರೋ ಅಥವ ಲಾಹೋರೋ ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ' ಎಂದು ಹೇಳಿಕೆ ನೀಡಿದ್ದ ಸಂಜಯ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಮಾರ್ಕೆಟ್ ಠಾಣೆ ಪೊಲೀಸರು ಶಾಸಕರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
'ಸಿದ್ದರಾಮಯ್ಯ ನೀವು ಹುಟ್ಟಿದ್ದು ಮೈಸೂರಲ್ಲಾ ಅಥವಾ ಲಾಹೋರ್ ನಲ್ಲಾ?'
ನವೆಂಬರ್ 7ರಂದು ಟಿಪ್ಪು ಜಯಂತಿ ವಿರೋಧಿಸಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಜಯ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮಾರ್ಕೆಟ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 153 (ಎ), 143, 149, 188, 283, 289ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಜಯ ಪಾಟೀಲ್ ಬಂಧನಕ್ಕೆ ಒತ್ತಾಯಿಸಿದ್ದಾರೆ.
'70 ವರ್ಷದ ಬಳಿಕ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. ಟಿಪ್ಪು ಜಯಂತಿ ಆಚರಿಸಿದರೆ ತಪ್ಪಿಲ್ಲ ಎಂದು ಹೇಳುವ ಸಿಎಂಗೆ ಪಾಕಿಸ್ತಾನಕ್ಕೆ ಕಳಿಸಿದ್ರೆ ತಪ್ಪಿಲ್ಲ' ಎಂದೂ ಸಂಜಯ ಪಾಟೀಲ್ ಹೇಳಿದ್ದರು.