'ಜಯಮಾಲಾ ಯಾವ ಮಾನದಂಡದ ಮೇಲೆ ಸಚಿವರಾದರು?'
ಬೆಳಗಾವಿ, ಜೂನ್ 12 : 'ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ನಡೆದುಕೊಂಡಿಲ್ಲ. ಜಯಮಾಲಾ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಯಾವ ಮಾನದಂಡದ ಆಧಾರದ ಮೇಲೆ ಸಚಿವ ಸ್ಥಾನ ನೀಡಲಾಗಿದೆ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 'ನನ್ನ ನೋವನ್ನು ಈಗಾಗಲೇ ಮಾಧ್ಯಮಗಳ ಮೂಲಕ ಹೈಕಮಾಂಡ್ ಮುಂದೆ ತೋಡಿಕೊಂಡಿದ್ದೇನೆ. ಪಕ್ಷದ ಹೈಕಮಾಂಡ್ ಹೇಳಿದಂತೆ ನಡೆದುಕೊಂಡಿಲ್ಲ' ಎಂದರು.
ಕಾಣದ ಕೈಗಳ ಕೆಲಸದಿಂದ ಸಚಿವ ಸ್ಥಾನ ತಪ್ಪಿದೆ: ಲಕ್ಷ್ಮೀ ಹೆಬ್ಬಾಳ್ಕರ್
'ಎಂಎಲ್ಸಿಗಳನ್ನು ಮೊದಲು ಸಚಿವರನ್ನಾಗಿ ಮಾಡುವುದಿಲ್ಲ ಎಂದು ಪಕ್ಷ ಹೇಳಿತ್ತು. ಆದರೆ, ಹೇಳಿದಂತೆ ನಡೆದುಕೊಂಡಿಲ್ಲ. ಜಯಮಾಲಾ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಯಾವ ಆಧಾರದ ಮೇಲೆ ಸಚಿವ ಸ್ಥಾನ ನೀಡಲಾಗಿದೆ?' ಎಂದು ಕೇಳಿದರು.
'ನಾನು ಪಕ್ಷಕ್ಕಾಗಿ 20 ವರ್ಷ ದುಡಿದಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆ ಇಲ್ಲ. ಈಗ ಮಾತ್ರ ನನಗೆ ಅನ್ಯಾಯವಾಗಿದೆ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಜಯಮಾಲಾಗೆ ಸಚಿವ ಸ್ಥಾನ, ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಅಸಮಾಧಾನ
2018ರ ವಿಧಾನಸಭೆ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ (ಖಾನಾಪುರ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ರೂಪಾ ಶಶಿಧರ್ (ಕೆಜಿಎಫ್), ಕನೀಜ್ ಫಾತಿಮಾ (ಗುಲ್ಪರ್ಗಾ ಉತ್ತರ) ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ ಅವರು ಸಚಿವರಾಗಿದ್ದಾರೆ.