ಬಿಜೆಪಿ ರಾಜ್ಯ, ರಾಷ್ಟ್ರ ಮುಖಂಡರಿಂದ ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ
ಬೆಳಗಾವಿ, ಮಾರ್ಚ್ 01: ಅಕ್ರಮ ಕಸಾಯಿ ಖಾನೆ ವಿರುದ್ಧ ಧನಿ ಎತ್ತಿದ ಬಿಜೆಪಿ ಸದಸ್ಯರಿಗೆ ಬೆದರಿಕೆ ಒಡ್ಡಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಇಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರುಗಳು ಬೆಳಗಾವಿಗೆ ಬಂದು ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ ನಡೆಸಿದರು.
ಬೆಳಗಾವಿಯ 7 ಅಕ್ರಮ ಕಸಾಯಿ ಖಾನೆಯ ಮೇಲೆ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಮುಚ್ಚುವಂತೆ ಆಗ್ರಹಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಹರ್ಷವರ್ಧನ್ ಎಂಬುವರಿಗೆ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಸಹೋದರ ರಾಜು ಸೇಠ್ ಅವರು ಬೆದರಿಕೆ ಸಹ ಒಡ್ಡಿದ್ದರು. ಈ ವಿಷಯ ಸುದ್ದಿ ಆಗುತ್ತಿದ್ದಂತೆ ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ಮೊದಲಿಗೆ ಪೊಲೀಸ್ ಕಮಿಷನರ್ ಅವರು ಬಿಜೆಪಿ ಸಂಸದರು ಮತ್ತು ಮುಖಂಡರನ್ನು ಒಳ ಹೋಗದಂತೆ ತಡೆದರು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಪರಿಶೀಲನೆಗೆ ಬಂದ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳನ್ನು , ಸ್ಥಳೀಯ ಸಂಸದರನ್ನು ತಡೆಯುತ್ತೀರಾ ಎಂದು ಜೋರು ಧ್ವನಿಯಲ್ಲಿ ಜಗದೀಶ್ ಶೆಟ್ಟರ್ ಅವರು ದಬಾಯಿಸಿದರು.
ಕಾಂಗ್ರೆಸ್ ಶಾಸಕನ ಸಹೋದರನಿಂದ ಜೀವ ಬೆದರಿಕೆ: ಆರೋಪ
ಸಚಿವರು ಆದೇಶ ನೀಡಿದರೂ ಅಕ್ರಮ ಕಸಾಯಿ ಖಾನೆ ಬೀಗ ತೆರೆಯಲು ತಡ ಮಾಡಿದ ಪೊಲೀಸರ ವರ್ತನೆಗೆ ಕೋಪಗೊಂಡ ಸಚಿವೆ ಮೇನಕಾ ಗಾಂಧಿ ಅವರು ಎಸಿಪಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೋಲ್ಡ್ ಸ್ಟೋರೇಜ್ ಹೆಸರಿನಲ್ಲಿ ಅಕ್ರಮ ಕಸಾಯಿ ಖಾನೆ ನಡೆಸಲಾಗುತ್ತಿದ್ದು, ಇದಕ್ಕೆ ಸ್ಥಳೀಯ ಶಾಸಕರ ಬೆಂಬಲ ಇದೆ ಹಾಗಾಗಿ ಈ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಮನವಿ ಮಾಡಲಾಗುವುದು ಈ ಪ್ರಕರಣದಲ್ಲಿ ಅಕ್ರಮಕ್ಕೆ ಸಹಕರಿಸಿದ ಪೊಲೀಸರ ಮೇಲೂ ತನಿಖೆ ಮಾಡುವಂತೆ ಕೋರಲಾಗುವುದು ಎಂದು ಮೇನಕಾ ಗಾಂಧಿ ಹೇಳಿದರು.