ಕೆರೆಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳ ಸಾವು
ಬೆಳಗಾವಿ, ಅಕ್ಟೋಬರ್ 10: ಮನೆಯ ಮುಂದಿನ ದೇವಸ್ಥಾನದ ಕೆರೆಯಲ್ಲಿ ಆಟವಾಡಲು ಹೋಗಿದ್ದಾಗ, ಕಾಲು ಜಾರಿ ಕೆರೆಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಧಾರುಣವಾಗಿ ಸಾವನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆನಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಕ್ಕಳನ್ನು ಶ್ರೀನಾಥ್ ಬಾಚಲಕರ (3) ಮತ್ತು ಅರ್ಣವ್ ಬಾಚಲಕರ (2) ಎಂದು ಗುರುತಿಸಲಾಗಿದೆ.
ಈ ಇಬ್ಬರು ಮಕ್ಕಳು ಮನೆಯ ಮುಂದೆ ಇರುವ ದೇವಸ್ಥಾನದಲ್ಲಿ ಮಧ್ಯಾಹ್ನದ ಸಮಯದಲ್ಲಿ ಆಟವಾಡಲು ಹೋಗಿದ್ದರು. ಹಾಗೆ ಆಟ ಆಡುತ್ತಾ ದೇವಸ್ಥಾನದ ಮುಂದೆ ಇರುವ ಕೆರೆಯ ಬಳಿ ಹೋಗಿದ್ದಾರೆ. ಬಳಿಕ ಕರೆಯಲ್ಲಿ ಕಾಲು ಜಾರಿ ಬಿದ್ದು ಧಾರುಣವಾಗಿ ಸಾವನಪ್ಪಿದ್ದಾರೆ.
ಮಕ್ಕಳು ದೇವಸ್ಥಾನದಲ್ಲಿ ಆಟ ಆಡಿ ಮನೆಗೆ ಬಾರದೆ ಇದ್ದಾಗ ಅನುಮಾನಗೊಂಡ ಮನೆಯವರು ಹುಡುಕಾಟ ನಡೆಸಿದ್ದಾರೆ. ಇಬ್ಬರು ಮಕ್ಕಳುಎಲ್ಲಿಯೂ ಕಾಣದೇ ಇದ್ದಾಗ ಕರೆಯಲ್ಲಿ ಬಿದ್ದಿರುವ ಅನುಮಾನಗೊಂಡು ಹುಡುಕಿದ್ದಾರೆ.
ಬಳಿಕ ಇಬ್ಬರ ಮಕ್ಕಳ ಶವ ಕೆರೆಯಲ್ಲಿ ಸಿಕ್ಕಿದೆ. ಮುದ್ದಾದ ಎರಡು ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ನಿಪ್ಪಾಣಿ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಬಳಿಕ ಹೆತ್ತವರಿಗೆ ಮರಳಿಸಲಾಗಿದ್ದು ಬೆನಾಡಿ ಗ್ರಾಮದಲ್ಲಿ ಮಕ್ಕಳ ಅಂತ್ಯ ಸಂಸ್ಕಾರ ಮಾಡಿದ್ದಾರೆ .
ಈ ಸಂಬಂಧ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.