ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ವಿವಾದ: ಭಿನ್ನಮತ ಸ್ಫೋಟದ ಸೂಚನೆ?
Recommended Video
ಬೆಂಗಳೂರು, ಅಕ್ಟೋಬರ್ 10: ಪಿಎಲ್ ಡಿ ಬ್ಯಾಕ್ ಮ್ಯಾನೇಜರ್ ಅನ್ನು ಅಮಾನತು ಮಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡೆ ಮೈತ್ರಿ ಸರ್ಕಾರದಲ್ಲಿ ಮತ್ತೆ ಭಿನ್ನಾಭಿಪ್ರಾಯಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
ರೈತರ ಖಾತೆಗೆ ಜಮಾ ಮಾಡಬೇಕಿದ್ದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಮ್ಯಾನೇಜರ್ ಎಸ್ ಟಿ ಕುಲಕರ್ಣಿ ಅವರನ್ನು ಅ.5 ರಂದು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇದುವರೆಗೆ ಸುಮಾರು 12 ಲಕ್ಷ ರೂ.ಗಳನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದ್ದು, ಅಮಾನತಿಗೆ ಕಾರಣ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಎಂಬ ಮಾತು ಕೇಳಿಬರುತ್ತಿದೆ.
ಮತ್ತೆ ಶುರುವಾಯ್ತು ಲಕ್ಷ್ಮಿ ಹೆಬ್ಬಾಳ್ಕರ್ ಆಟ, PLD ಬ್ಯಾಂಕ್ ಮ್ಯಾನೇಜರ್ ಅಮಾನತು!
ಇತ್ತೀಚೆಗಷ್ಟೇ ಸರ್ಕಾರವನ್ನು ಬೀಳಿಸುವ ಮಟ್ಟಿಗೆ ಗುಲ್ಲೆಬ್ಬಿಸಿದ್ದ ಪಿಎಲ್ ಡಿ ಬ್ಯಾಂಕ್ ಪ್ರಕರಣ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು, ಮ್ಯಾನೇಜರ್ ಅಮಾನತು ಮತ್ತೊಮ್ಮೆ ಭಿನ್ನಮತ ಸ್ಫೋಟಕ್ಕೆ ಕಾರಣವಾಗುವ ಸೂಚನೆ ದೊರೆತಿದೆ.
ಜಾರಕಿಹೊಳಿ ಬೆಂಬಲಿಗ ಕುಲಕರ್ಣಿ!
ಮ್ಯಾನೇಜರ್ ಎಸ್ ಟಿ ಕುಲಕರ್ಣಿ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡವರು. ಆ ಕಾರಣದಿಂದಲೇ ಈ ಆರೋಪವನ್ನು ಬೇಕೆಂದೇ ಅವರ ಮೇಲೆ ಹೊರಿಸಿ, ಅಮಾನತು ಮಾಡಲಾಗಿದೆ ಎಂಬ ದೂರು ಕೇಳಿಬರುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಾದ ಮಹಾಂತೇಶ್ ಎಂಬುವವರೇ ಈ ದೂರು ನೀಡಿದ್ದು, ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕುಲಕರ್ಣಿ ಅವರನ್ನು ಅಮಾನತುಗೊಳಿಸಿ ಸಾಮಾನ್ಯ ಶ್ರೇಣಿ ಸಮಿತಿ ಕಾರ್ಯದರ್ಶಿ ದಿವಾಕರ್ ಎಂಬುವವರು ಆದೇಶ ಹೊರಡಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ -ಜಾರಕಿಹೊಳಿ ಭಿನ್ನಮತ: ಬೂದಿಮುಚ್ಚಿದ ಕೆಂಡ, ಮತ್ತೆ ಸ್ಪೋಟಿಸುವುದೇ?
ಮತ್ತೆ ಭಿನ್ನಮತ?
ಇದೀಗ ಬೆಳಗಾವಿಯಲ್ಲಿ ಮತ್ತೊಮ್ಮೆ ಮತ್ತೆ ಭಿನ್ನಮತ ಸ್ಫೋಟಿಸುವ ಸೂಚನೆ ಸಿಕ್ಕಿದೆ. ಜಾರಕಿಹೊಳಿ ಬಣವನ್ನು ಗುರಿಯಾಗಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಜಾರಕಿಹೊಳಿ ಸಹೋದರರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಘಟನೆಯ ನಂತರ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಹೆಬ್ಬಾಳ್ಕರ್ ಅವರನ್ನು ಕೆಳಗಿಳಿಸಬೇಕು ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಬೂದಿ ಮುಚ್ಚಿದ ಕೆಂಡದಂತಿರುವ ಜಾರಕಿಹೊಳಿ ಸಹೋದರರ ಆಕ್ರೋಶ ಪ್ರಕಟಗೊಳ್ಳಲು ತಾವೇ ವಿಷಯ ನೀಡಿದಂತಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ಗೆ 30 ಕೋಟಿ ಹಣ ಮತ್ತು ಸಚಿವ ಸ್ಥಾನದ ಆಮಿಷ
ಲಕ್ಷ್ಮಿ ಹೆಬ್ಬಾಳ್ಕರ್ V/S ಜಾರಕಿಹೊಳಿ
ಸೆಪ್ಟೆಂಬರ್ 7 ರಂದು ನಡೆದಿದ್ದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತ ಸ್ಫೋಟವಾಗಿತ್ತು. ಆದರೆ ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಸಂಧಾನದ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಮಹದೇವ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಬೆಳಗಾವಿ ರಾಜಕೀಯದಲ್ಲಿ ಬೆಂಗಳೂರಿನ ನಾಯಕರು, ಅದರಲ್ಲೂ ವಿಶೇಷವಾಗಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ತಲೆದೋರಿಸಿದ್ದು ಜಾರಕಿಹೊಳಿ ಸಹೋದರರಿಗೆ ಸಹ್ಯವಾಗಿರಲಿಲ್ಲ.
ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಸಿಟ್ಟು
ಸರ್ಕಾರ ಬೀಳಿಸುವುದಕ್ಕೆ ಹೊರಟಿದ್ದ ಜಾರಕಿಹೊಳಿ ಬ್ರದರ್ಸ್
ಈ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆಲುವು ಸಾಧಿಸಿದ ಮೇಲೆ ಮೈತ್ರಿ ಸರ್ಕಾರದಲ್ಲೇ ಬಿರುಕು ಉಂಟಾಗುವ ಸೂಚನೆಗಳು ಕಂಡವು. ಶಾಸಕರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಇಬ್ಬರೂ ತಮಗೆ ಇಪ್ಪತ್ತಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಮೈತ್ರಿ ಸರ್ಕಾರಕ್ಕೆ ದುಃಸ್ವಪ್ನವಾದರು. ವಿದೇಶಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ವಾಪಸ್ಸಾದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂಡಾಯ ಶಮನಕ್ಕೆ ಮನವಿ ಮಾಡಿದರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೂ ಜಾರಕಿಹೊಳಿ ಸಹೋದರರು ಅವರ ಮಾತಿಗೂ ಕ್ಯಾರೇ ಎನ್ನಲಿಲ್ಲ. ಆದರೆ ಕೊಟ್ಟಕೊನೆಯ ಪ್ರಯತ್ನವಾಗಿ ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ತೆರಳಿ ಸಹೋದರರ ಸವಾಲು ಎದುರಿಸಿದರು! ತಾತ್ಕಾಲಿಕವಾಗಿ ಬಂಡಾಯ ಶಮನ ಮಾಡಿದರು.