ಬೆಳಗಾವಿ ಮೇಯರ್, ಉಪಮೇಯರ್ ನಾಪತ್ತೆ
ಬೆಳಗಾವಿ, ನವೆಂಬರ್, 4: ಕನ್ನಡ ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದ ಬೆಳಗಾವಿ ಪಾಲಿಕೆ ಮೇಯರ್ ಸರಿತಾ ಪಾಟೀಲ್ ಹಾಗೂ ಉಪಮೇಯರ್ ಸಂಜಯ್ ಶಿಂಧೆ ನಾಪತ್ತೆಯಾಗಿದ್ದಾರೆ.
ಬೆಳಗಾವಿ ಮಹಾನಗರದ ಪ್ರಥಮ ಪೌರರು ಹಾಗೂ, ದ್ವಿತೀಯ ಪೌರರಿಬ್ಬರೂ ಪಾಲಿಕೆ ಆವರಣದಿಂದ ಸರ್ಕಾರಿ ವಾಹನದ ಸಮೇತ ನಾಪತ್ತೆಯಾಗಿದ್ದಾರೆ ಎಂದು ಬೆಳಗಾವಿ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮೇಯರ್ ಹಾಗೂ ಉಪಮೇಯರ್ ಅವರ ಚಾಲಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಎಂದು ಅವರು ಹೇಳಿದ್ದಾರೆ.
ನವೆಂಬರ್ 1ರಂದು ಕರಾಳ ದಿನ ಆಚರಿಸಿದ್ದ ಮಹಾರಾಷ್ಟ್ರ ಏಕೀರಣ ಸಮಿತಿ (ಎಂಇಎಸ್) ಜತೆ ಸಂಪರ್ಕ ಹೊಂದಿರುವ ಮೇಯರ್ ಹಾಗೂ ಉಪಮೇಯರ್ ಇಬ್ಬರೂ ಮಹಾರಾಷ್ಟ್ರಕ್ಕೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರಾಳ ದಿನ ಆಚರಿಸಿರುವುದರಿಂದ ಕನ್ನಡಪರ ಸಂಘಟನೆಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂಬ ಭಯದಿಂದ ನಾಪತ್ತೆಯಾಗಿರಬಹುದು ಎಂದು ಹೇಳಲಾಗಿದೆ.
ಮೇಯರ್ ಹಾಗೂ ಉಪಮೇಯರ್ ಅವರು ರಾಜ್ಯ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಡಳಿತದಿಂದ ವರದಿ ಪಡೆದುಕೊಂಡಿದ್ದು, ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಸಾಧ್ಯತೆ ಇದೆ.
ಈ ಹಿಂದೆಯೂ ಸಹ ಕರಾಳ ದಿನಾಚರಣೆಯಲ್ಲಿ ಪಾಲಿಕೆ ಮುಖ್ಯಸ್ಥರು ಭಾಗವಹಿಸಿದ್ದಕ್ಕಾಗಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಾಗಿತ್ತು.