ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ
ಬೆಳಗಾವಿ, ಡಿ. 29 : ಬೆಳಗಾವಿಯಲ್ಲಿ ಆಪರೇಶನ್ ಟೈಗರ್ ಯಶಸ್ವಿಯಾಗಿದ್ದು, ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಖಾನಾಪುರ ತಾಲೂಕಿನ ಜಾಂಬೋಟಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಕಾರ್ಯಾಚರಣೆ ನಾಲ್ಕು ದಿನಗಳ ಬಳಿಕ ಯಶಸ್ವಿಯಾಗಿದೆ.
ಖಾನಾಪುರ
ತಾಲೂಕಿನ
ಕೊಂಗಳಾ
ಗ್ರಾಮದ
ಅರಣ್ಯ
ಪ್ರದೇಶದಲ್ಲಿ
ನರಭಕ್ಷಕ
ಹುಲಿಯನ್ನು
ಅರಣ್ಯ
ಇಲಾಖೆಯ
ಸಿಬ್ಬಂದಿ
ಭಾನುವಾರ
ಸಂಜೆ
6.30ರ
ಸುಮಾರಿಗೆ
ಗುಂಡಿಕ್ಕಿ
ಕೊಂದಿದ್ದಾರೆ.
ಡಿಸೆಂಬರ್
24ರಂದು
ಈ
ಹುಲಿ
ಮಹಿಳೆಯನ್ನು
ಕೊಂದು
ಹಾಕಿತ್ತು,
ಅಂದಿನಿಂದ
ಹುಲಿಗಾಗಿ
ಹುಡುಕಾಟ
ನಡೆದಿತ್ತು.
250ಕ್ಕೂ ಹೆಚ್ಚು ಸಿಬ್ಬಂದಿ ಆಪರೇಷನ್ ಟೈಗರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹುಲಿಯ ಹುಡುಕಾಟದಲ್ಲಿ ತೊಡಗಿದ್ದ ತಂಡದಲ್ಲಿದ್ದ ಬಿ.ಎಂ. ಪಾಟೀಲ ಎಂಬುವವರು ಗುಂಡು ಹೊಡೆದು ಹುಲಿಯನ್ನು ಕೊಂದಿದ್ದಾರೆ. ಹುಲಿಯ ಕುತ್ತಿಗೆಯಲ್ಲಿ ರೇಡಿಯೊ ಕಾಲರ್ ಪತ್ತೆಯಾಗಿದ್ದು, ಇದು ಚಿಕ್ಕಮಗಳೂರಿನಿಂದ ಖಾನಾಪುರದ ಬಳಿಯ ಕಾಡಿಗೆ ತಂದು ಬಿಡಲಾದ ಹುಲಿ ಎಂಬುದು ಖಚಿತವಾಗಿದೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆ ಸಂದರ್ಭದಲ್ಲಿ ಭಾನುವಾರ ಮೊದಲ ಬಾರಿಗೆ ಹುಲಿ ಸಿಬ್ಬಂದಿ ಕಣ್ಣಿಗೆ ಕಾಣಿಸಿಕೊಂಡಿತ್ತು. ಹುಲಿಯನ್ನು ಕೊಲ್ಲಲು ಅನುಮತಿ ಪಡೆದಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕೊನೆಗೂ ವ್ಯಾಘ್ರನನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಇಬ್ಬರು ಮಹಿಳೆಯರು, ಎಂಟು ಜಾನುವಾರುಗಳನ್ನು ಹುಲಿ ಕೊಂದು ತಿಂದಿತ್ತು. [ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ]
ಖಾನಾಪುರದ ಶಿರೋಲಿಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ಹುಲಿಯ ಕಳೆಬರವನ್ನು ರಾತ್ರಿ ತರಲಾಗಿದೆ. ಮೂವರು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಿ ನಂತರ ಹುಲಿರಾಯನ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.
ನರಭಕ್ಷಕನ ಹೆಜ್ಜೆಗಳು
* ನ.13 ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರನ್ನು ಅಟ್ಟಿಸಿಕೊಂಡು ಬಂದಿದ್ದ ಹುಲಿರಾಯ.
* ನ. 15 ಚಿಕ್ಕಮಗಳೂರಿನ ಪಂಡರವಳ್ಳಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸುಮಿತ್ರಾ (25) ಎಂಬ ಮಹಿಳೆ ಮೇಲೆ ಹುಲಿ ದಾಳಿ.
* ನ.17 ಚಿಕ್ಕಮಗಳೂರಿನಲ್ಲಿ ಹುಲಿರಾಯ ಸೆರೆ, ಬೆಳಗಾವಿಯ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಿಗೆ ರವಾನೆ.
* ಖಾನಾಪುರದ ಭೀಮಗಡದಲ್ಲಿ ಹುಲಿಯನ್ನು ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ. ಗ್ರಾಮದ 2 ಹಸುಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಹುಲಿ.
* ಡಿ.24 ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಂಜನಾ (23) ಎಂಬ ಮಹಿಳೆಯ ಮೇಲೆ ದಾಳಿ.
* ಡಿ.25 ಹುಲಿಹಿಡಿಯುವ ಕಾರ್ಯಾಚರಣೆ ಆರಂಭ, ಗುಂಡಿಕ್ಕಿ ಕೊಲ್ಲಲು ಅನುಮತಿ.
* ಡಿ.28 ಖಾನಾಪುರ ತಾಲೂಕಿನ ಕೊಂಗಳಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹುಲಿಗೆ ಗುಂಡೇಟು.