ಚಳಿಗಾಲದ ಅಧಿವೇಶನದ ವೇಳೆ ಸರ್ಕಾರಕ್ಕೆ ಚಳಿ ಬಿಡಿಸಲು ಮಾದಿಗರು ಸಜ್ಜು
ಬೆಳಗಾವಿ, ನವೆಂಬರ್ 11: ನ್ಯಾ. ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಚಲೋ ಬೆಳಗಾವಿ ಹೋರಾಟವನ್ನು ಮಾದಿಗ ಡಂಡೋರ ಸಮುದಾಯ ಹಮ್ಮಿಕೊಂಡಿದೆ.
ಬೆಳಗಾವಿಯಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಸ್ತುವಾರಿ ಕೊಳ್ಳ ವೆಂಕಟೇಶ್, ಸಮಿತಿ ಸದಸ್ಯ ದೇವರಾಜ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು.
ನವೆಂಬರ್ 15 ರಂದು ಬೆಳಗಾವಿ ಸುವರ್ಣ ಸೌಧದ ಎದುರು ಮಾದಿಗರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನ್ಯಾ. ಸದಾಶಿವ ಆಯೋಗದ ವರದಿ ಜಾರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಮುಂದುವರೆಸಲಾಗಿದೆ.
ರಾಜ್ಯದ ವಿವಿಧೆಡೆಗಳಿಂದ ಸುಮಾರು ಒಂದು ಲಕ್ಷ ಮಾದಿಗರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಚಳಿಗಾಲ ಅಧಿವೇಶನದಲ್ಲಿ ಸದಾಶಿವ ವರದಿ ಅಂಗೀಕಾರಕ್ಕೆ ಆಗ್ರಹಿಸಲಾಗುವುದು ಎಂದು ದೇವರಾಜ ಅವರು ಹೇಳಿದರು.
ನ್ಯಾಯಮೂರ್ತಿ ಸದಾಶಿವ ಆಯೋಗ : ಆಯೋಗ ತನ್ನ ವರದಿಯಲ್ಲಿ 96 ಲಕ್ಷ ಪರಿಶಿಷ್ಟರಲ್ಲಿ ಶೇ 33.74 ಎಡಗೈನವರು, ಶೇ 32ರಷ್ಟು ಬಲಗೈನವರು ಶೇ 23.64 ಸ್ಪರ್ಶಜಾತಿಗಳಾಗಿ ಶೇ 4.64 ಇತರ ಪರಿಶಿಷ್ಟ ಜಾತಿಯವರು ಎನ್ನುವ ಅಂಕಿ-ಅಂಶ ನೀಡಿದೆ.
ಮೀಸಲಾತಿಯ ಮರುವರ್ಗಿಕರಣಕ್ಕೆ ಶಿಫಾರಸು ಮಾಡಿದ್ದು ಇದು ದಲಿತರಲ್ಲಿಯೆ ಒಡಕಿಗೆ ಕಾರಣವಾಗಿದೆ. ರಾಜ್ಯದಲ್ಲಿನ ಒಟ್ಟು 101 ಜಾತಿಗಳ ದಲಿತ ಸಮುದಾಯವನ್ನು ನಾಲ್ಕು ವರ್ಗಗಳಾಗಿ ವಿಭಜಿಸಿ ಶೇ 15ರಷ್ಟಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೆ ತರುವಂತೆ ಶಿಫಾರಸು ಮಾಡಿದೆ. ಇದರಲ್ಲಿ ಎಡಗೈಗೆ ಶೇ 6, ಬಲಗೈಗೆ ಶೇ 5, ಸ್ಪರ್ಶರಿಗೆ ಶೇ 3 ಹಾಗೂ ಇತರರಿಗೆ ಶೇ 1 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ.
ವರದಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕಾದರೆ ವರದಿಯನ್ನು ಆಧಾರಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರ್ಗಿಕರಣದ ಅನುಮೋದನೆಗಾಗಿ ಕಳಿಸಿಕೊಡಬೇಕಾಗುತ್ತೆ.