ಬೆಳಗಾವಿಯ ಲೈನ್ಮನ್ ಸಮೀರಗೆ ಲಕ್ಷ ರು. ಬಹುಮಾನ
ಬೆಳಗಾವಿ, ಜು. 2 : ವಿದ್ಯುತ್ ಕಂಬ ಹತ್ತುವ ಸಾಧನವನ್ನು ಕಂಡು ಹಿಡಿದ ಬೆಳಗಾವಿ ಹೆಸ್ಕಾಂ ವಿಭಾಗದ ಲೈನ್ಮನ್ ಸಮೀರ ಮುತಾಲಿಕ ದೇಸಾಯಿ ಅವರಿಗೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ರಾಜ್ಯ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ ಅವರು ಘೋಷಿಸಿದ್ದಾರೆ.
ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಹೆಸ್ಕಾಂ ವಿದ್ಯುತ್ ವಿತರಣಾ ಉಪಕೇಂದ್ರದ ಆವರಣದಲ್ಲಿ ಗುರುವಾರ ಲೈನ್ಮನ್ ಸಮೀರ ಮುತಾಲಿಕ ದೇಸಾಯಿ ಅವರು, ನೂತನವಾಗಿ ಆವಿಷ್ಕಾರ ಮಾಡಿದ ವಿದ್ಯುತ್ ಕಂಬ ಹತ್ತುವ ಸಾಧನದ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.
ಈ ಪ್ರಾತ್ಯಕ್ಷಿತೆ ವೀಕ್ಷಿಸಿದ ಡಿ.ಕೆ.ಶಿವಕುಮಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುತಾಲಿಕ ಅವರ ಸಾಧನೆ ಗಮನಾರ್ಹವಾಗಿದ್ದು ಇವರ ಕ್ರಿಯಾಶೀಲತೆಗೆ ಒಂದು ಲಕ್ಷ ರೂ.ಗಳನ್ನು ಇಲಾಖೆ ವತಿಯಿಂದ ಪ್ರೋತ್ಸಾಹದಾಯಕವಾಗಿ ನೀಡುವುದಾಗಿ ಪ್ರಕಟಿಸಿದರು.
ನೂತನವಾಗಿ ಅವಿಷ್ಕಾರ ಮಾಡಿರುವ ವಿದ್ಯುತ್ ಕಂಬ ಹತ್ತುವ ಸಾಧನ ಇಲಾಖೆಯ ಸಾವಿರಾರು ಲೈನ್ಮೆನ್ಗಳಿಗೆ ಅನುಕೂಲವಾಗಲಿದೆ. ಸಮೀರ ಅವರು ಕಳೆದ ಆರು ವರ್ಷಗಳಿಂದ ಈ ಇಲಾಖೆಯಲ್ಲಿ ಲೈನ್ಮನ್ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಅಂತರ್ಜಾಲಗಳಲ್ಲಿ ಅಧ್ಯಯನ ಮಾಡಿ ವಿದ್ಯುತ್ ಕಂಬ ಹತ್ತುವ ಉಪಕರಣವನ್ನು ಕಂಡುಹಿಡಿದಿದ್ದಾರೆ. ಈ ಉಪಕರಣಕ್ಕೆ ಕೆವಲ 500 ರು.ಗಳು ಮಾತ್ರ ವೆಚ್ಚವಾಗಿದೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಈ ಉಪಕರಣ ಬಳಸುವುದನ್ನು ಕಡ್ಡಾಯ ಮಾಡುವುದಿಲ್ಲ ಆಸಕ್ತಿ ಇರುವ ಲೈನ್ಮನ್ಗಳು ಬಳಸಬಹುದಾಗಿದೆ. ಇಲಾಖೆಯ ನಿಯಮದಂತೆ ಬರಿಗಾಲಿನಲ್ಲಿ ವಿದ್ಯುತ್ ಕಂಬ ಹತ್ತುವುದನ್ನು ಪ್ರೋತ್ಸಾಹಿಸಲಾಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಲೈನ್ಮನ್ ಸಮೀರ ಅವರು, ಈ ಆವಿಷ್ಕಾರಕ್ಕಾಗಿ ಕೆಲವು ತಿಂಗಳಿಂದ ಅಂತರ್ಜಾಲವನ್ನು ಜಾಲಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ಈ ಸಾಧನದಿಂದ ಮಹಿಳಾ ಲೈನ್ಮನ್ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಶ್ರಮವಿಲ್ಲದೆ ಎಲ್ಲರೂ ಸುಲಭವಾಗಿ ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯಗಳಲ್ಲಿ ತೊಡಗಬಹುದು. ಇದನ್ನು ಕಬ್ಬಿಣ ರಾಡು, ಪಾಸ್ಟಿಕ್ ಚಪ್ಪಲಿ ಬಳಸಿ ತಯಾರಿಸಲಾಗಿದೆ. ವಿದ್ಯುತ್ ಶಾರ್ಟ್ಸರ್ಕಿಟ್ನಿಂದ ಲೈನ್ಮನ್ಗೆ ಯಾವುದೇ ಅಪಾಯವಾಗದಂತೆ ತಡೆಯಲು ಕಾಲಿಗೆ ಗ್ಲೌಸ್ ಬಳಸಲಾಗುವುದೆಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕ ಆರ್ ಎಸ್ ಹೆರೂರು, ಮುಖ್ಯ ಅಭಿಯಂತರರ ಸಿದ್ದರಾಜು, ಬೆಳಗಾವಿ ಕಾರ್ಯನಿರ್ವಾಹಕ ಅಭಿಯಂತರ ಎ ಎಸ್ ಬಬ್ಬಲೇಶ್ವರ ಹಾಗೂ ಬಸವರಾಜ ಸೇರಿದಂತೆ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.