ಮೋದಿ ಮೆಚ್ಚಿದ ನಾಯಕನಿಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ
ಬೆಳಗಾವಿ, ಜನವರಿ 15: ಶಿವಪ್ರತಿಷ್ಠಾನ ಹಿಂದೂಸ್ಥಾನ್ ಸಂಘಟನೆಯ ನಾಯಕ ಮನೋಹರ್ ಸಂಭಾಜಿ ಭೀಡೆ ಅವರಿಗೆ ಜನವರಿ 20ರ ತನಕ ಜಿಲ್ಲೆಯ ಗಡಿ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಆದೇಶ ಹೊರಡಿಸಲಾಗಿದೆ.
ಪ್ರಧಾನಿ ಮೋದಿ, ಉದ್ಧವ್ ಠಾಕ್ರೆ, ದೇವೇಂದ್ರ ಫಡ್ನವೀಸ್ ರಂಥವರು ಮೆಚ್ಚಿದ ಹಿಂದೂಪರ ಭಾಷಣಕಾರ ಭೀಡೆ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಎಫ್ ಐಆರ್ ದಾಖಲಾಗಿದೆ.
ಭೀಮಾ ಕೋರೆಂಗಾವ್ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದಾರೆ. ಇದೇ ಕಾರಣಕ್ಕೆ ಬೆಳಗಾವಿ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಂಭಾಜಿ ಭೀಡೆಗೆ ನಿರ್ಬಂಧಿಸಲಾಗಿತ್ತು.
ಶಿವಪ್ರತಿಷ್ಠಾನ ಹಿಂದೂಸ್ಥಾನ್ ವತಿಯಿಂದ ಗಾಡಕೋಟ ಮೋಹಿಮ್ ಮತ್ತು ಸುವರ್ಣ ಸಿಂಹಾಸನ ಪುನರ್ ನಿರ್ಮಾಣ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸದಂತೆ ಭೀಡೆ ಅವರಿಗೆ ನಿರ್ಬಂಧ ಹೇರಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ಹಾಗೂ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ದುರುದ್ದೇಶದಿಂದದ್ದಾರೆ ಹಾಗೂ ಇದರಿಂದ ಎರಡು ಕೊಮುಗಳ ನಡುವೆ ಗಲಾಟೆ ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ಗಡಿ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಜನವರಿ 13ರ ಮಧ್ಯರಾತ್ರಿ 12ರಿಂದ ಜನವರಿ 20ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.