ರಮೇಶ್ ಕುಮಾರ್ ಭಾವನಾತ್ಮಕ ಭಾಷಣ, 10 ಬೆಳವಣಿಗೆ
ಬೆಳಗಾವಿ, ನವೆಂಬರ್ 16: ಹೊರಗಡೆ ವೈದ್ಯರ ನಿಲ್ಲದ ಮುಷ್ಕರ.. ಅಧಿವೇಶನದೊಳಗೆ ರಮೇಶ್ ಕುಮಾರ್ ಭಾವನಾತ್ಮಕ ಭಾಷಣ.. ಕೆಪಿಎಂಇ ಕಾಯಿದೆ ಬಗ್ಗೆ ಬಿಸಿಬಿಸಿ ಚರ್ಚೆ.. ಪರಸ್ಪರ ಕಾಲೆಳೆದುಕೊಂಡ ಸಿಟಿ ರವಿ, ಸಿದ್ದರಾಮಯ್ಯ...
ಸಿಟಿ ರವಿ- ಸಿದ್ದು ಮಧ್ಯೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಹೀಗೆ ಸ್ವಾರಸ್ಯಕರ ಬೆಳವಣಿಗೆಗಳು, ನೆನಪಿನಲ್ಲಿ ಉಳಿಯುವಂಥ ರಮೇಶ್ ಕುಮಾರ್ ಭಾಷಣದಂಥ ಘಟನೆಗಳಿಗೆ ಗುರುವಾರದ ಬೆಳಗಾವಿ ಅಧಿವೇಶನ ಸಾಕ್ಷಿಯಾಯಿತು.
ಖಾಸಗಿ ವೈದ್ಯರ ಮುಷ್ಕರಕ್ಕೆ ಎಂಇಎಸ್ ಸಂಘಟನೆ ಬೆಂಬಲ
ಇದೇ ದಿನ ವಿಧಾನಸಭೆಯಲ್ಲಿ ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ ತಿದ್ದುಪಡಿ ವಿಧೇಯಕ-2017ನ್ನು ಮಂಡಿಸಲಾಯಿತು. ಜತೆಗೆ ಬಹುನಿರೀಕ್ಷಿತ ಮೌಢ್ಯ ನಿಷೇಧ ಕಾಯಿದೆಯೂ ವಿಧಾನಸಭೆ ಅನುಮೋದನೆ ನೀಡಿತು.
ಸದನದಲ್ಲಿ ವೈದ್ಯರ ಮುಷ್ಕರದ ಕದನ : ಯಾರು, ಏನು ಹೇಳಿದರು?
ಒಟ್ಟಾರೆ ಇಂದು ಬೆಳಗಾವಿ ಅಧಿವೇಶನದ ಸುತ್ತಾ ಮುತ್ತಾ ನಡೆದ ಬೆಳವಣಿಗೆಳ ಚಿತ್ರಣ ಇಲ್ಲಿದೆ.
ವೈದ್ಯರ ಮುಷ್ಕರ ಚರ್ಚೆಯೊಂದಿಗೆ ಕಲಾಪ ಆರಂಭ
ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಬಿಜೆಪಿ ವೈದ್ಯರ ಮುಷ್ಕರದ ವಿಷಯ ಪ್ರಸ್ತಾಪಿಸಿತು. ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಕ್ಷಣ ಚರ್ಚೆ ನಡೆಸಲು ಅವಕಾಶ ನೀಡಿ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಮನವಿ ಮಾಡಿದರು.
ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತೇನೆ ಎಂದು ಹೇಳಿದ ಸ್ಪೀಕರ್ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು.
'ಮುಷ್ಕರ ನಿರತ ವೈದ್ಯರನ್ನು ಕರೆಸಿ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತನಾಡಲಿ. ವೈದ್ಯರು ಸಹ ಮುಷ್ಕರ ನಿಲ್ಲಿಸಿ, ಮಾನವೀಯತೆಯಿಂದ ಜನರ ಸೇವೆ ಮಾಡಲಿ' ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.
ವೈದ್ಯರ ಮುಷ್ಕರ ಏಕೆ?, ಖಾರವಾಗಿ ಪ್ರಶ್ನಿಸಿದ ಸಿಎಂ
ಪರಿಷತ್ ನಲ್ಲೂ ವೈದ್ಯರದ್ದೇ ಚರ್ಚೆ
ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವೈದ್ಯರ ಮುಷ್ಕರದ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. 'ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಆದ್ದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ವೈದ್ಯರನ್ನು ಕರೆದು ಆರೋಗ್ಯ ಸಚಿವರು, ಸಿಎಂ ಇಬ್ಬರು ಮಾತಾಡಲಿ' ಎಂದು ಈಶ್ವರಪ್ಪ ಹೇಳಿದರು.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ರಮೇಶ್ ಕುಮಾರ್ ಭಾವನಾತ್ಮಕ ಭಾಷಣ
ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, "ಈ ಮಸೂದೆ ವೈದ್ಯರ, ವೈದ್ಯ ವೃತ್ತಿಯ, ವೈದ್ಯಕೀಯ ಸಂಸ್ಥೆಗಳ ವಿರುದ್ಧ ಅಲ್ಲ," ಎಂದಿದ್ದಾರೆ.
"ಶಾಸಕರು, ಮುಖ್ಯಮಂತ್ರಿಗಳು, ಮಂತ್ರಿಗಳು ದಡ್ಡರು, ಮೂರ್ಖರು. ಆದರೆ ವೈದ್ಯರು ದಡ್ಡರಾ? ಪ್ರತಿಭಟನೆ ಮಾಡುವಾಗ ವೈದ್ಯರು ಯೋಚನೆ ಮಾಡಬೇಕು ಅಲ್ಲವಾ? ಸ್ವಲ್ಪ ಮಂದಿ ವೈದ್ಯರು ಪ್ರತಿಭಟನೆ ಮಾಡೋಣ, ಇನ್ನೂ ಸ್ವಲ್ಪ ಮಂದಿ ವೈದ್ಯರು ಸೇವೆ ಮಾಡೋಣ ಎಂದು ತೀರ್ಮಾನ ಮಾಡಬೇಕು ಅಲ್ಲವಾ," ಎಂದು ಪ್ರಶ್ನಿಸಿದರು.
ಜನಸಾಮಾನ್ಯರು
ಏನು
ಮಾಡಿದರು,
ರೋಗಿಗಳು
ಏನು
ಮಾಡಿದರು?
ಕೆಲ
ಮಾಧ್ಯಮಗಳು
ಬಾಯಿಗೆ
ಬಂದಂತೆ
ಪ್ರಚಾರ
ಮಾಡುತ್ತಿವೆ.
ಚಿಕಿತ್ಸೆ
ವಿಫಲವಾದರೆ
ವೈದ್ಯರಿಗೆ
ಜೈಲು
ಶಿಕ್ಷೆ
ಎಂದು
ಮಾಧ್ಯಮಗಳು
ಪ್ರಚಾರ
ಮಾಡಿವೆ.
ಇವರ್ಯಾರಿಗೂ
ಜವಾಬ್ದಾರಿ
ಇಲ್ಲವಾ?
ರೋಗಿ
ಸತ್ತಾಗ
ಆಸ್ಪತ್ರೆಯವರು
ಹೆಣವನ್ನು
ಕೊಡದೇ
ಇದ್ದಾಗ
ಇವರು
ಪ್ರಸಾರ
ಮಾಡಿದ್ದಾರಾ
ಎಂದು
ಅವರು
ಪ್ರಶ್ನಿಸಿದರು.
ಪಿಎಗೆ ಸಂಬಳ ಆಗಿಲ್ವಂತೆ
ಪರಿಷತ್ ನಿಯಮ 330 ಅಡಿಯಲ್ಲಿ ಚರ್ಚೆ ಆರಂಭಿಸಿದ ಸದಸ್ಯ ಬಿಜೆ ಪುಟ್ಟಸ್ವಾಮಿ ಅವರು, ಸಂಸದರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೆ ಗುತ್ತಿಗೆ ಆಧಾರದ ಆಪ್ತ ಸಹಾಯಕರಿಗೆ 8-9 ತಿಂಗಳ ಸಂಬಳ ನೀಡಿಲ್ಲ ಎಂದರು.
ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ನಿರ್ಮಲ ಸೀತಾರಾಮನ್, ಸೇರಿದಂತೆ ಸಂಸದರು, ರಾಜ್ಯದ ಶಾಸಕರ ಆಪ್ತ ಸಹಾಯಕರಿಗೆ ಸಂಬಳ ನೀಡಿಲ್ಲ, ಕೂಡಲೇ ಸಂಬಳ ಬಿಡುಗಡೆ ನೀಡಬೇಕು, ಗುತ್ತಿಗೆ ಆಧಾರದ ಆಪ್ತ ಸಹಾಯಕರಿಗೆ ಸಂಬಳ ಜಾಸ್ತಿ ಮಾಡಬೇಕು, ಅಧಿವೇಶನ ಅವಧಿಯಲ್ಲಿ ಅವರಿಗೂ ಭತ್ಯೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಚಿವ ಕಾಗೋಡು ತಿಮ್ಮಪ್ಪ ಅವರು ಉತ್ತರಿಸಿ, ಆಪ್ತ ಸಹಾಯಕರಿಗೆ ಸಂಬಳವನ್ನ ಬಿಡುಗಡೆ ಮಾಡಿಸುತ್ತೇನೆ, ಬಾಕಿ ಸಂಬಳ ತಕ್ಷಣ ಬಿಡುಗಡೆ ಮಾಡಲು ಅಧಿಕಾರಿ ಸೂಚನೆ ನೀಡುತ್ತೇನೆ ಎಂದರು.
ಎಂಇಎಸ್ ಸಂಘಟನೆ ಬೆಂಬಲ
ಕಳೆದ ಮೂರು ದಿನಗಳಿಂದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿಯಲ್ಲಿನ ಅಂಶಗಳನ್ನು ಕೈಬಿಡುವಂತೆ ಬೆಳಗಾವಿಯ ಸುವರ್ಣಸೌಧದ ಸಮೀಪ ತಾರಿಹಾಳದಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ವೈದ್ಯರ ಮುಷ್ಕರಕ್ಕೆ ಎಂಇಎಸ್ ಸಂಘಟನೆ ಬೆಂಬಲ ಸೂಚಿಸಿದೆ. ಮಾಜಿ ಶಾಸಕ ಎಂಇಎಸ್ ಮುಖಂಡ ಮನೋಹರ್ ಕಿಣೇಕರ್ ಮಾತನಾಡಿ, ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಸರಿಯಾಗಿದೆ. ನಿಮ್ಮ ಬೇಡಿಕೆಗಳು ನ್ಯಾಯಬದ್ಧವಾಗಿದೆ. ವೈದ್ಯಕೀಯ ಶಿಕ್ಷಣದ ಬಗ್ಗೆ ಜ್ಞಾನ ಇಲ್ಲದವರು ಮುಷ್ಕರವನ್ನು ವಿರೋಧಿಸುತ್ತಿದ್ದಾರೆ. ಈ ವಿಧೇಯ ಜಾರಿಗೆ ಬಂದರೆ ವೈದ್ಯರನ್ನು ವಿಚಾರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸಿಎಂ-ರವಿ ಸ್ವಾರಸ್ಯಕರ ಚರ್ಚೆ
ಮೌಢ್ಯ ನಿಷೇಧ ಕಾಯ್ದೆ ಬಗ್ಗೆ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಈ ವೇಳೆ ಸಿದ್ದರಾಮಯ್ಯ ಮತ್ತು ಬಿಜೆಪಿ ಸಿಟಿ ರವಿ ಪರಸ್ಪರ ಕಾಲೆಳೆದುಕೊಂಡು ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಕಾಯ್ದೆ ತರುವವರೂ ಮೌಢ್ಯಕ್ಕೆ ಒಳಗಾಗಬಾರದು. ಕಾಗೆ ಕುಳಿತಿತ್ತು ಅಂತ ಸಿಎಂ ಕಾರು ಬದಲಿಸಿದರಂತೆ ಎಂದು ರವಿ ಮುಖ್ಯಮಂತ್ರಿಗಳ ಕಾಲೆಳೆದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗಾಗಿಲ್ಲ, ಕಾಗೆ ಕೂರುವ ಮೊದಲೇ ಕಾರು ಬದಲಿಸಲು ನಿರ್ಧರಿಸಿದ್ದೆ. 20 ಕಾಗೆಗಳನ್ನು ತಂದು ಕೂರಿಸಿದರೂ ಕಾರು ಬದಲಿಸಲ್ಲ ಎಂದರು.
ನಾನು ಚಾಮರಾಜನಗರಕ್ಕೆ ಬಹಳಷ್ಟು ಬಾರಿ ಹೋಗಿದ್ದೇನೆ. ಜೆ.ಎಚ್.ಪಟೇಲರು ಹೊಸ ಜಿಲ್ಲೆ ಉದ್ಘಾಟನೆಗೂ ಹೋಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆಗ ರವಿ, ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿಲ್ಲ ಅಂತ ಮತ್ತೆ ವ್ಯಂಗ್ಯವಾಡಿದರು.
ಆಗ ಮುಖ್ಯಮಂತ್ರಿ, ಹಿಂದೆ ಬಹಳಷ್ಟು ಬಾರಿ ಹೋಗಿದ್ದೆ. ಈ ಬಾರಿ ಸಮಯ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
"ನಮ್ಮ ಕಡೆ ಇಸ್ಪೀಟ್ ಆಡೋರು ಆಟದಲ್ಲಿ ಸೋಲಬಾರದು ಅಂತ ಯಂತ್ರ ಕಟ್ಟಿಸ್ತಾರೆ. ಹಾಗೇ ಸಿದ್ದರಾಮಯ್ಯ ಕೂಡ ಪರಮೇಶ್ವರ್ ಸೋಲಲಿ ಅಂತ ಯಂತ್ರ ಕಟ್ಟಿಸಿದ್ರಾ?" ಎಂದು ಸಿದ್ದರಾಮಯ್ಯ ಅವರನ್ನು ಸಿ.ಟಿ.ರವಿ ಕಿಚಾಯಿಸಿದರು. ಅದಕ್ಕೆ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಬಾಹುಬಲಿಗೆ ಸುರಿಯುವ ಹಾಲು ತುಪ್ಪಕ್ಕೂ ಆಕ್ಷೇಪ
"ಹೋಮ- ಯಾಗಗಳಲ್ಲಿ ಡಬ್ಬಿಗಟ್ಟಲೆ ತುಪ್ಪ ಸುರಿಯುತ್ತಾರೆ. ಬಡ ಮಕ್ಕಳು ತುಪ್ಪದ ರುಚಿಯನ್ನೇ ನೋಡಿರುವುದಿಲ್ಲ. ಇನ್ನು ಬೆಲೆ ಬಾಳುವ ರೇಷ್ಮೆ ಸೀರೆ ಯಾಗಕ್ಕೆ ಹಾಕ್ತಾರೆ. ಬಡ ಹೆಣ್ಣುಮಕ್ಕಳು ಅಂಥ ಸೀರೆಯನ್ನು ಉಟ್ಟಿರುವುದಿಲ್ಲ. ಇದಕ್ಕೆಲ್ಲ ಬ್ರೇಕ್ ಹಾಕಬೇಕು ಅಂತ ಇತ್ತು. ಆದರೆ ಸಾಂಪ್ರದಾಯಿಕ ಆಚರಣೆಗೆ ಅಡ್ಡಿ ಮಾಡುತ್ತಿಲ್ಲ" ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
ಈ ವೇಳೆ ಮಹಾಮಸ್ತಕಾಭಿಷೇಕದ ವಿಚಾರ ಪ್ರಸ್ತಾಪಿಸಿದ ಜೆಡಿಎಸ್ ನ ವೈಎಸ್ ವಿ ದತ್ತ, ಅಲ್ಲಿ ಹಾಲು- ತುಪ್ಪ ಎಲ್ಲಾ ಸುರಿಯುತ್ತಾರೆ. ಅದನ್ನು ಕಾಯ್ದೆಯಲ್ಲಿ ತಂದು ಬಿಡಿ ಅಂತ ಸಲಹೆ ನೀಡಿದರು. ಆದರೆ ಇದಕ್ಕೆ ಅವರ ಪಕ್ಷದವರಿಂದಲೇ ವಿರೋಧ ವ್ಯಕ್ತವಾಯಿತು.
ಮೌಢ್ಯ ನಿಷೇಧ ವಿಧೇಯಕ ಪಾಸ್
'ಕರ್ನಾಟಕ ಅಮಾನವೀಯ, ದುಷ್ಟ, ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನ ವಿಧೇಯಕ-2017'ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಸುದೀರ್ಘ ಚರ್ಚೆ ಬಳಿಕ ಕಾನೂನಿಗೆ ಸದನ ಸಮ್ಮತಿ ನೀಡಿತು.
ಖಾಸಗಿ ವೈದ್ಯರ ಮೇಲೆ ಸರಕಾರದಿಂದ ಗದಾಪ್ರಹಾರ
ಅಧಿವೇಶನದ ಒಳಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದರೆ ಹೊರಗಡೆ ವೈದ್ಯರ ಮುಷ್ಕರ ಮುಂದುವರಿದಿತ್ತು.
"ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾರದೇ ಖಾಸಗಿ ವೈದ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ," ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಭಟನಾನಿರತ ವೈದ್ಯರನ್ನ ಉದ್ದೇಶಿಸಿ ಮಾತನಾಡಿದ ಅವರು, "ಈಗಾಗಲೇ ಸಿಎಂ ನಿಮ್ಮನ್ನು ಕರೆಸಿ ಮಾತನಾಡಿದ್ದಾರೆ. ಆದರೆ ಓರ್ವ ಜವಾಬ್ದಾರಿಯುತ ಮಂತ್ರಿಗಳು ವೈದ್ಯರನ್ನು ಕರೆಯಿಸಿ ಮಾತನಾಡಬೇಕಿತ್ತು," ಎಂದು ಹೇಳಿದ್ದಾರೆ.
ಪ್ರಾಣಿ ಹಿಂಸಾಚಾರ ತಡೆ ವಿಧೇಯಕ ಮಂಡನೆ
ವಿಧಾನಸಭೆಯಲ್ಲಿ ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ ತಿದ್ದುಪಡಿ ವಿಧೇಯಕ-2017ನ್ನು ಪಶುಸಂಗೋಪನಾ ಸಚಿವ ಎ. ಮಂಜು ಮಂಡಿಸಿದರು.
ವಿಧಾನ ಸಭೆಯಲ್ಲಿ ಕಂಬಳ ಕುರಿತ ತಿದ್ದುಪಡಿ ವಿಧೇಯಕವನ್ನು ಈ ಹಿಂದೆ ಮಂಡಿಸಲಾಗಿತ್ತು. ಇದೀಗ ಕಂಬಳಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮೊದಲ ವಿಧೇಯಕ ಹಿಂಪಡೆಯಲು ಎರಡನೇ ವಿಧೇಯಕ ಮಂಡನೆ ಮಾಡಲಾಯಿತು.