ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ: 15 ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಬೆಳಗಾವಿ, ಫೆಬ್ರವರಿ 19 : ಹದಿನಾಲ್ಕು ತಾಲೂಕುಗಳನ್ನು ಒಳಗೊಂಡ ಇಡೀ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಸೂಕ್ತ ಎಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ 15 ನೇ ದಿನಕ್ಕೆ ಕಾಲಿಟ್ಟಿದೆ.
ಇಡೀ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದರೆ ಒಂದು ಸಣ್ಣ ರಾಜ್ಯ ಪ್ರವಾಸ ಮಾಡಿದಷ್ಟು ಅನುಭವವಾಗುತ್ತದೆ. ಚಿಕ್ಕೋಡಿ ಭಾಗದ ಜನರ ವಿವಿಧ ಬೇಡಿಕೆ ಈಡೇರಬೇಕಾದರೆ ಜಿಲ್ಲೆಯ ವಿಭಜನೆ ಅವಶ್ಯಕವಾಗಿದೆ. ಚಿಕ್ಕೋಡಿ ಜಿಲ್ಲೆ ಆಗುವುದರಿಂದ ನೆರೆಯ ರಾಯಭಾಗ ಮತ್ತು ಅಥಣಿ ತಾಲೂಕಿನ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದಿದ್ದಾರೆ. ಬಿ.ಆರ್. ಸಂಗಪ್ಪಗೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಜನಪ್ರತಿನಿಧಿಗಳು ಜಿಲ್ಲಾ ಹೋರಾಟಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಜಿಲ್ಲೆಯ ನಾಯಕರು ಸ್ವಾರ್ಥ ಬಿಟ್ಟು ಘೋಷಣೆ ಮಾಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿ ಎದುರು ಹೋರಾಟಗಾರರು ಉಪವಾಸ ಪ್ರತಿಭಟನೆ ನಡೆಸುತ್ತಿದ್ದಾರೆ.