ಖಾನಾಪುರದಲ್ಲಿ ಮರಕ್ಕೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು
ಬೆಳಗಾವಿ, ಏಪ್ರಿಲ್ 9: ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ದೇಗುಲಹಳ್ಳಿಯಲ್ಲಿ ಸಂಭವಿಸಿದೆ. ಹುಂಡೈ ಐ20 ಕಾರಿನಲ್ಲಿ ಖಾನಾಪುರ ತಾಲೂಕಿನ ಬೀಡಿಯಿಂದ ಕಿತ್ತೂರಿಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
ಹಿಮಾಚಲ ಪ್ರದೇಶದಲ್ಲಿ ಕಮರಿಗೆ ಬಸ್ ಉರುಳಿ 26 ಮಕ್ಕಳ ಸಾವು
ಮಂಡ್ಯ, ಮೈಸೂರು, ಬೆಂಗಳೂರು ಮೂಲದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ ರಘುನಾಥ್, ಹೂನಸೂರು ತಾಲೂಕಿನ ಬಿಳಿಕೇರಿ ಗ್ರಾಮದ ಸುಧೀಂದ್ರಗೌಡ, ಮಂಡ್ಯ ಮೂಲದ ಮಲ್ಲಿಕಾರ್ಜುನ ಮೃತ ದುರ್ದೈವಿಗಳಾಗಿದ್ದಾರೆ. ಭದ್ರಾವತಿ ಮೂಲದ ಅಮಿತ್ ಆರ್.ಪಿ. ಹಾಗೂ ಚಾಲಕ ಮಹಮ್ಮದ್ ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕಿತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಮೂವರು ಸಣ್ಣ ಪ್ರಾಯದವರಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸ್ನೇಹಿತರರಿಬಹುದು ಎಂದು ಶಂಕಿಸಲಾಗಿದೆ. ಗಾಯಾಳುಗಳಿಗೆ ಪ್ರಜ್ಞೆ ಬಂದಿರಲಿಲ್ಲವಾದ್ದರಿಂದ ಪೊಲೀಸರಿಗೂ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ.