ಬೆಳಗಾವಿಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಪ್ರಾಣ ತೆಗೆದ ವೇಗದ ಕಾರು
ಬೆಳಗಾವಿ, ಅಕ್ಟೋಬರ್ 28: ಕಾರು ಚಲಿಸಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು, ಇನ್ನೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸುನ್ನಾಳ ಹೊರವಲಯದ ಕಟಕೋಳ ಬೆಳಗಾವಿ ರಸ್ತೆ ಮಾರ್ಗದಲ್ಲಿ ಶುಕ್ರವಾರ ಸಂಭವಿಸಿದೆ.
ಪ್ರಶ್ನೆ ಮಾಡಲು ಬಂದವರ ಬಂಧನ, ಮಾಳಮಾರುತಿ ಠಾಣೆ ಮುಂದೆ ಹೈಡ್ರಾಮ
ರಾಮದುರ್ಗದಿಂದ ಯರಗಟ್ಟಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದ ಪರಿಣಾಮ ಸುನ್ನಾಳ ಗ್ರಾಮದ ವಿಠ್ಠಲ ಬಾಳಪ್ಪ ಪಾಶ್ಚಾಪೂರ ಅವರ ಮೊಮ್ಮಕ್ಕಳಾದ ಅಶ್ವಿನಿ ನಾಗಪ್ಪ ಹಳ್ಳೂರ (8) ಮೃತಪಟ್ಟಿದ್ದಾಳೆ. ಮೃತ ಬಾಲಕಿಯ ಸಹೋದರ ಬಸವರಾಜ ನಾಗಪ್ಪ ಹಳ್ಳೂರ (10) ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕನನ್ನು ಚಿಕಿತ್ಸೆಗಾಗಿ ರಾಮದುರ್ಗ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀನಿವಾಸ ಹೊಂಡಾ, ಕಟಕೋಳ ಪಿಎಸ್ ಐ ಆರ್.ಎಂ. ಸಂಕನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಲಕ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ, ಆದ್ದರಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಈ ಕುರಿತು ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.