ಪ್ರವಾಸಕ್ಕೆ ತೆರಳಿದ್ದ ಬೆಳಗಾವಿಯ 8 ವಿದ್ಯಾರ್ಥಿಗಳು ನೀರುಪಾಲು
ಪ್ರವಾಸಕ್ಕೆಂದು ತೆರಳಿದ್ದ ಬೆಳಗಾವಿಯ 8 ವಿದ್ಯಾರ್ಥಿಗಳು ನೀರುಪಾಲಾದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ವೈರಿ ಬೀಚ್ ನಲ್ಲಿ ನಡೆದಿದೆ.
ಬೆಳಗಾವಿ, ಏಪ್ರಿಲ್ 15: ಪ್ರವಾಸಕ್ಕೆಂದು ತೆರಳಿದ್ದ ಬೆಳಗಾವಿಯ ಮರಾಠಾ ಇಂಜಿನಿಯರಿಂಗ್ ಕಾಲೇಜಿನ 8 ಜನ ವಿದ್ಯಾರ್ಥಿಗಳು ನೀರುಪಾಲಾದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಸಿಂಧು ದುರ್ಗ ಜಿಲ್ಲೆಯ ವೈರಿ ಬೀಚ್ ನಲ್ಲಿ ನಡೆದಿದೆ.
ಇಂಜಿನಿಯರಿಂಗ್ ಓದುತ್ತಿದ್ದ 40 ವಿದ್ಯಾರ್ಥಿಗಳು ನಿನ್ನೆ (ಏಪ್ರಿಲ್ 14) ಮಹಾರಾಷ್ಟ್ರದ ವೈರಿ ಬೀಚ್ ಗೆ ಪ್ರವಾಸಕ್ಕೆಂದು ತೆರಳಿದ್ದರು. ಇವರಲ್ಲಿ ಬೆಳಗಾವಿ ಮೂಲದ 8 ವಿದ್ಯಾರ್ಥಿಗಳು ಸಮುದ್ರದ ಪಾಲಾಗಿದ್ದಾರೆ.
ಈಜುವುದಕ್ಕೆ ಹೋಗಿದ್ದ 11ರಲ್ಲಿ 3 ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದು, ಉಳಿದ 8 ಜನ ನೀರು ಪಾಲಾಗಿದ್ದಾರೆ. ಅಲ್ಲಿ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದ್ದರೂ ಅವರು ನೀರಿಗಿಳಿದರೆಂದು ಸ್ಥಳೀಯರು ತಿಳಿಸಿದ್ದಾರೆ.
ಇವರಲ್ಲಿ 5 ವಿದ್ಯಾರ್ಥಿ ಮತ್ತು 3 ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ವಿದ್ಯಾರ್ಥಿಗಳ ಸಾವಿನಿಂದಾಗಿ ಕಾಲೇಜು ಮತ್ತು ಕುಟುಂಬ ವರ್ಗದ ಆಕ್ರಂದನ ಮುಗಿಲುಮುಟ್ಟಿದೆ.
ಮೃತರನ್ನು ಮಂಜುಮಿನ್ ಹನಿಕರ್, ಕಿರಣ್ ಖಾಂಡೇಕರ್, ಆರತಿ ಚವಾಣ್, ಅವಧೂತ್ ತಹಶೀಲ್ದಾರ್, ನಿತಿನ್ ಮುತ್ನಾಡ್ಕರ್, ಕರುಣಾ ಬೆರ್ಡೆ, ಮಾಯಾ ಕೊಹ್ಲೆ, ಮಹೇಶ್ ಕುಜ್ದಾರ್ಕರ್ ಎಂದು ಗುರುತಿಸಲಾಗಿದೆ.
50 students went without permission. Going to the spot with ambulance: Dr V Udipi, Principal, Maratha Engineering College, Belgaum pic.twitter.com/5WT53mnovo
— ANI (@ANI_news) April 15, 2017
ಅನುಮತಿ ಪಡೆದಿರಲಿಲ್ಲ : ಮರಾಠಾ ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ. ವಿ ಉಡುಪಿ ಪ್ರಕಾರ, ವಿದ್ಯಾರ್ಥಿಗಳು ಪ್ರವಾಸ ಹೊರಡುವ ಮುನ್ನ ಕಾಲೇಜಿನ ಅನುಮತಿ ಪಡೆದಿರಲಿಲ್ಲ ಎಂದಿದ್ದಾರೆ. ತಾವೀಗ ಆಂಬ್ಯುಲನ್ಸ್ ನೊಂದಿಗೆ ಅಲ್ಲಿಗೆ ಹೋಗುತ್ತಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.