ಚಹಾ ಕುಡಿಯಲು ಹೋಗಿ ಜೀವ ಕಳೆದುಕೊಂಡ ನತದೃಷ್ಟರು
ಬೆಳಗಾವಿ, ಫೆಬ್ರವರಿ 27: ಚಹಾ ಕುಡಿಯಲೆಂದು ರಸ್ತೆ ಬದಿ ಗಾಡಿ ನಿಲ್ಲಿಸಿದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೆಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿಯ ಗಡಿ ಭಾಗದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕಾನ್ನಾಳ ನಿವಾಸಿಗಳಾದ ಟಿಪ್ಪು ಚಪ್ಪರಬಂದ್(24), ಅಬ್ದುಲಸಾಬ್ ಚಪ್ಪರಬಂದ್(40) ಮೃತ ಪಟ್ಟಿದ್ದು, ಕಾರು ಚಾಲಕ ಸವ ಸಾವನ್ನಪ್ಪಿದ್ದು ಆತನ ಹೆಸರು ತಿಳಿದುಬಂದಿಲ್ಲ. ಅಪಘಾತದಲ್ಲಿ ಮೂವರು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹರಾಷ್ಟ್ರ ರಾಜ್ಯಕ್ಕೆ ಸೇರಿದ ಸೋಲಾಪುರ ಜಿಲ್ಲೆಯ ತುಳಜಾಪುರ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಇದು ರಾಜ್ಯದ ಗಡಿಗೆ ಹೊಂದಿಕೊಂಡೇ ಇದೆ.
ಮೃತರಲ್ಲಿ ಇಬ್ಬರು ಮತ್ತು ಮೂವರು ಗಾಯಾಳುಗಳು ವಿಜಯಪುರ ಜಿಲ್ಲೆಯ ಕನ್ನಾಳ ನಿವಾಸಿಗಳಾಗಿದ್ದು, ಮಹರಾಷ್ಟ್ರದ ಔರಂಗಾಬಾದ್ ಗೆ ತೆರಳಿ ವಾಪಸ್ಸಾಗುವಾಗ ರಸ್ತೆ ಬದಿ ಚಹಾ ಕುಡಿಯಲೆಂದು ಗಾಡಿ ನಿಲ್ಲಿಸಿದ್ದಾರೆ ಆಗ ಅತಿ ವೇಗವಾಗಿ ಬಂದ ಮಹರಾಷ್ಟ್ರ ನೊಂದಣಿ ಸಂಖ್ಯೆಯುಳ್ಳ ಸ್ವಿಫ್ಟ್ ಕಾರು ಗುದ್ದಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ವಿಫ್ಟ್ ಕಾರಿನ ಟೈರ್ ಸ್ಪೋಟಗೊಂಡ ಕಾರಣ ಕಾರು ಚಾಲನಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.