"ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ 200 ಕೋಟಿ ಅವ್ಯವಹಾರ"
ಬೆಳಗಾವಿ, ನವೆಂಬರ್ 17 : ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಡೀಮ್ಡ್ ವಿಶ್ವವಿದ್ಯಾಲಯ ಅಲ್ಲ ಸ್ವಾಯತ್ತ ಸಂಸ್ಥೆ ಕಾನೂನು ಪ್ರಕಾರವೇ ನೋಂದಣಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಸಂದರ್ಭದಲ್ಲಿ ಜೆಡಿಎಸ್ ಶಾಸಕ ರಮೇಶ್ ಬಾಬು ಅವರು ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಪ್ ಎಕನಾಮಿಕ್ಸ್ ಸಂಸ್ಥೆ ರಚನೆಯಲ್ಲೂ ಅಕ್ರಮ ನಡೆದಿದೆ. ಒಬ್ಬ ತಾತ್ಕಾಲಿಕ ನಿರ್ದೇಶಕರಿಗೆ 200ಕೋಟಿ ರೂ. ವ್ಯವಹಾರದ ಅಧಿಕಾರ ನೀಡಲಾಗಿದೆ ಎಂದು ಆರೋಪಕ್ಕೆ ಪ್ರತ್ಯುತ್ತರವಾಗಿ ಬಸವರಾಜರಾಯರೆಡ್ಡಿ ಮಾತನಾಡಿ, ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದೇ 150ಕೋಟಿ ರೂ. ಅಂದಾಜು ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ಕರ್ನಾಟಕ ವಸತಿ ಮಹಾಮಂಡಳಿಯು ಟೆಂಡರ್ ಕರೆದಿದೆ. ಆಡಳಿತ ಮಂಡಳಿಯ ರಚನೆಯೂ ಕಾನೂನುಬದ್ಧವಾಗಿದೆ. ಈ ತಿಂಗಳ ಒಳಗಾಗಿ ತಜ್ಞರ ಸಮಿತಿಯು ಸಂಸ್ಥೆಯ ನಿಯಮಾವಳಿಗಳನ್ನು ರಚನೆ ಮಾಡುತ್ತಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಈ ವರ್ಷ ಪದವಿ ನೀಡಲು ಅನುಕೂಲವಾಗಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಖಾಯಂ ಕುಲಪತಿ ನಿರ್ದೇಶಕರ ನೇಮಕಕ್ಕೆ ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಐವರು ತಜ್ಞರ ಸಮಿತಿ ರಚಿಸಲಾಗಿದೆ. ಎಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ. ಈ ಮೊದಲು ನಿರ್ದೇಶಕರಾಗಿದ್ದ ಅನೂಪ್ ಪೂಜಾರಿ ಬೋಸ್ಟನ್ ವಿವಿಗೆ ಹೋಗಬೇಕು ಎಂದು ಬಯಸಿದ್ದರಿಂದ ಅವರನ್ನು ಬಿಡುಗಡೆ ಮಾಡಿ ಈಗ ದೇಶಪಾಂಡೆಯವರನ್ನು ತಾತ್ಕಾಲಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.