ಮಗುವಿನ ಜೀವ ರಕ್ಷಣೆಗೆ ಬೆಳಗಾವಿಯಲ್ಲಿ ಝೀರೋ ಟ್ರಾಫಿಕ್
ಬೆಳಗಾವಿ, ಡಿಸೆಂಬರ್ 16: ಯಾವಾಗಲೂ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಭಾನುವಾರ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಬರುತ್ತಿದ್ದ ಮಗುವಿಗೆ ಝೀರೋ ಟ್ರಾಫಿಕ್ ಕಲ್ಪಿಸಿಕೊಟ್ಟ ಬೆಳಗಾವಿನಗರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ಮುಬಿನಾ ಯಲಿಗಾರ ಎಂಬುವವರು ತಮ್ಮ 13 ದಿನದ ಮಗುವಿನ ತೀವ್ರವಾದ ಹೃದಯ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಮುಧೋಳದಿಂದ ಬೆಳಗಾವಿ ನಗರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಇದರ ಕುರಿತು ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ಸಿಕ್ಕಿದೆ.
ದಾರಿಯುದ್ದಕ್ಕೂ ಪೊಲೀಸ್ ಬೆಂಗಾವಲು
ತಕ್ಷಣ ಬೆಳಗಾವಿ ನಗರವ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು, ಮಾರಿಹಾಳ, ಮಾಳಮಾರುತಿ ಹಾಗೂ ಬೆಳಗಾವಿ ಉತ್ತರ ಸಂಚಾರಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿ
ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಮಾರಿಹಾಳ ಠಾಣೆಯ ಪೊಲೀಸರು ಝೀರೋ ಟ್ರಾಫಿಕ್ ಗೆ ಬೇಕಾದ ಎಲ್ಲಾ ವ್ಯೆವಸ್ಥೆಯನ್ನು ಮಾಡಿದ್ದಾರೆ. ಅಂಬ್ಯುಲೆನ್ಸ್ ಸಂಚರಿಸುವ ದಾರಿಯುದ್ದಕ್ಕೂ ಬೆಂಗಾವಲು ನಿಂತು ಆಸ್ಪತ್ರೆಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
13 ವರ್ಷದ ಹಸೂಳೆಗೆ ಹೃದಯ ಖಾಯಿಲೆ
ನಂತರ ಮುಂದಿನ ಸಿಂದೊಳ್ಳಿ ಕ್ರಾಸ್ ನಿಂದ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಬೆಂಗಾವಲು ನಿಂತಿದ್ದಾರೆ. ಬಳಿಕ ಬೆಳಗಾವಿ ಉತ್ತರ ಸಂಚಾರ ಠಾಣೆಯ ಪೊಲೀಸರ ಬೆಂಗಾವಲಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಸಾಯಂಕಾಲ 4:20 ರಿಂದ ಕರಡಿಗುದ್ದಿ ಗ್ರಾಮದಿಂದ 4:45 ಗಂಟೆಯವರಿಗೆ ಝೀರೋ ಟ್ರಾಫಿಕ್ ವ್ಯೆವಸ್ಥೆ ಮಾಡಲಾಗಿತ್ತು. ಇದಕ್ಕೆ ಬೆಳಗಾವಿ ನಗರ ಪೊಲಿಸರು ಸಹಕಾರ ಕೊಟ್ಟಿದ್ದರಿಂದ ಚಿಕ್ಕ ಹಸುಳೆಯ ತಾಯಿ ಮುಬಿನಾ ಯಲಿಗಾರ ಅವರು ಪೊಲೀಸರ ಕರ್ತವ್ಯಕ್ಕೆ ಕೃತಜ್ಞತೆ ಹೇಳೀದ್ದಾರೆ.
ಪೊಲೀಸರ ಮೇಲೆ ವಾಹನ ಸವಾರರ ಅಸಮಾಧಾನ
ಮಗುವನ್ನು ಅಂಬ್ಯುಲೆನ್ಸನಲ್ಲಿ ಚಿಕಿತ್ಸೆ ಕೊಡಿಸಲು ಝೀರೋ ಟ್ರಾಫಿಕ್ ನಲ್ಲಿ ಕರೆತರುವಾಗ ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಇತರ ವಾಹನಗಳು ರಸ್ತೆಯಲ್ಲೇ ನಿಂತು ಅಂಬ್ಯುಲೆನ್ಸ ಗೆ ದಾರಿ ಮಾಡಿಕೊಟ್ಟವು.
ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!
ಈ ಸಂದರ್ಭದಲ್ಲಿ ವಾಹನ ಸವಾರರು ಮೊದಲಿಗೆ ಮಂತ್ರಿಗಳಿಗಾಗಿ ಝೀರೋ ಟ್ರಾಫಿಕ್ ಮಾಡಿದ್ದಾರೆ ಎಂದು ಪೊಲೀಸರ ಮೇಲೆ ಅಸಮಾಧಾನಗೊಂಡಿದ್ದರು. ನಂತರ ಪೊಲೀಸ್ ಬೆಂಗಾವಲಿನೊಂದಿಗೆ ವೇಗವಾಗಿ ಅಂಬ್ಯುಲೆನ್ಸ್ ಬರುವುದನ್ನು ಗಮನಿಸಿದ ಸವಾರರ ಸಿಟ್ಟು ಇಳಿಯಿತು.
ಅಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟ ವಾಹನ ಸವಾರರು
ಸ್ಥಳದಲ್ಲಿದ್ದ ಪೊಲೀಸರನ್ನು ವಿಚಾರಿಸಿದ ವಾಹನ ಸವಾರರು, ಇತ್ತೀಚಿಗೆ ಮಂತ್ರಿಗಳಿಗೆ, ರಾಜಕಾರಣಿಗಳಿಗೆ ಮಾತ್ರ ಝೀರೋ ಟ್ರಾಫಿಕ್ ವ್ಯೆವಸ್ಥೆ ಮಾಡುವುದನ್ನು ನೋಡಿದ್ದೇವೆ, ಆದರೆ ಅಂಬ್ಯುಲೆನ್ಸ್ ಗೆ ಮೊದಲ ಬಾರಿ ಝೀರೋ ಟ್ರಾಫಿಕ್ ಒದಗಿಸಲು ಕಾರಣವೇನು ಎಂದು ಕೇಳಿದರು.
ವಾಹನ ಸವಾರರ ಪ್ರಶ್ನೆಗೆ ಉತ್ತರಿಸಿ ಪೊಲೀಸರು, ಈ ಅಂಬ್ಯುಲೆನ್ಸ್ ನಲ್ಲಿ ಮುಧೋಳದಿಂದ 13 ದಿನದ ಹಸೂಳೆಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹೋಗುತ್ತಿದ್ದರಿಂದ ಝೀರೋ ಟ್ರಾಫಿಕ್ ವ್ಯೆವಸ್ಥೆ ಮಾಡಲಾಯಿತು ಎಂದರು. ಪೊಲೀಸರ ಉತ್ತರಕ್ಕೆ ಸಮಾಧಾನಗೊಂಡ ವಾಹನ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.