'ಮಹಾದಾಯಿ ವಿವಾದ ಬಗೆಹರಿಸಲು ದೇವೇಗೌಡರಂತೆ ಇಚ್ಛಾಶಕ್ತಿ ಬೇಕು'
ಬೆಳಗಾವಿ, ನವೆಂಬರ್ 23 : ವಿಧಾನಪರಿಷತ್ ಕಲಾಪದಲ್ಲಿ ನಡೆದ ಮಹದಾಯಿ ವಿವಾದ ಮೇಲಿನ ಚರ್ಚೆ ವೇಳೆ ಜೆಡಿಎಸ್ ನ ವೈ.ಎಸ್.ವಿ ದತ್ತ ಅವರು ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಕ್ಕೆ ಸರಿಯಾಗಿ ಛಾಟಿ ಬೀಸಿದರು.
ಮಹದಾಯಿ ವಿವಾದದಲ್ಲಿ ಕೆಂದ್ರ ಹಾಗೂ ರಾಜ್ಯ ಸರ್ಕಾರ ಎರಡರದ್ದೂ ಜವಾಬ್ದಾರಿ ಹೀನ ನಡೆ ಎಂದು ಟೀಕಿಸಿದ ವೈ.ಎಸ್.ವಿ.ದತ್ತ. ತಮಿಳುನಾಡು ರಾಜ್ಯದ ತೀರ್ವ ವಿರೋಧದ ನಡುವೆಯೂ ಕಾವೇರಿ ನೀರಿನ ವಿಷಯದಲ್ಲಿ ದೇವೆಗೌಡರು ತಳೆದಿದ್ದ ದಿಟ್ಟ ನಿರ್ಧಾರವನ್ನು ಸದನದ ನೆನಪಿಗೆ ತಂದರು.
ಕಾವೇರಿ ನಾಲ್ಕನೇ ಹಂತಕ್ಕೆ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಒಪ್ಪಿಗೆ ನೀಡಿರಲಿಲ್ಲ. ಈಗ ಮೋದಿ ಮಾಡುತ್ತಿರುವಂತೆಯೇ ಪಿ.ವಿ. ನರಸಿಂಹರಾಯರೂ ಸಹ ವ್ಯಾಜ್ಯ ನ್ಯಾಯಾಧೀಕರಣದಲ್ಲಿದೆ ಅನ್ನುವ ಕಾರಣ ಕೊಟ್ಟಿದ್ದರು ಆದರೆ ಅಂತಹಾ ವಿಷಮ ಪರಿಸ್ಥಿತಿಯಲ್ಲಿಯೂ ದೇವೇಗೌಡರು ಬೆಂಗಳೂರಿಗೆ ಕಾವೇರಿ ನೀರು ಹರಿಸುವ ದಿಟ್ಟ ನಿರ್ಧಾರ ಕೈಗೊಂಡರು ಎಂದು ಎಂದು ದೇವೇಗೌಡ ಅವರ ದಿಟ್ಟತನವನ್ನು ನೆನಪಿಗೆ ತಂದುಕೊಂಡರು.
ದಿಟ್ಟ ಆದೇಶ ಹೊರಡಿಸಿದ್ದ ದೇವೇಗೌಡ ಅವರು ಆದೇಶ ಪ್ರತಿಯಲ್ಲಿ 'ಸದ್ಯಕ್ಕೆ ಕಾವೇರಿ ನಾಲ್ಕನೇ ಹಂತದಿಂದ ನೀರು ಪಡೆಯುತ್ತೇವೆ ನ್ಯಾಯಾಧಿಕರಣದ ತೀರ್ಪು ಬಂದ ಮೇಲೆ ನಮ್ಮ ಪಾಲಿನ ನೀರಿನಲ್ಲಿ ಅದನ್ನು ಕಡಿತ ಮಾಡಿಕೊಳ್ಳಿ ಎಂದು ದೇವೇಗೌಡರು ಆದೇಶದಲ್ಲಿ ಹೇಳಿದ್ದರು' ಎಂದು ಹಳೆಯ ದಿನಗಳನ್ನು ನೆನೆದರು.
ಆನಂತರ ಜೂನ್ 1, 1996 ರಲ್ಲಿ ದೇವೇಗೌಡರು ಪ್ರಧಾನಿಯಾದರು. ಪ್ರಧಾನಿಯಾದ ಎಂಟೇ ತಿಂಗಳಲ್ಲೇ ದೇವೇಗೌಡರು ಕಾವೇರಿ ನಾಲ್ಕನೇ ಹಂತಕ್ಕೆ ಒಪ್ಪಿಗೆ ನೀಡಿದರು, ಇದರಿಂದ ಬೆಂಗಳೂರಿಗೆ ಕಾವೇರಿ ನೀರು ನಿಗುವಂತಾಯಿತು ಎಂದು ಹೇಳಿದರು. ಪಿ.ವಿ.ನರಸಿಂಹರಾವ್ ಅವರಿಗೆ ಆ ಇಚ್ಛಾಶಕ್ತಿ ಇರಲಿಲ್ಲ. ಆದರೆ ದೇವೇಗೌಡರಿಗೆ ಇತ್ತು ಎಂದು ತಮ್ಮ ನಾಯಕರ ನಡೆಯನ್ನು ಹೊಗಳಿದರು.
ಆದರೆ ಈಗಿನ ಕೇಂದ್ರ ಸರ್ಕಾರಕ್ಕೆ ಮಹದಾಯಿ ವಿವಾದ ಬಗೆಹರಿಸಬೇಕೆಂಬ ಹಪಹಪಿ ಇಲ್ಲ, ರಾಜ್ಯ ಸರ್ಕಾರಕ್ಕೆ ಅಚಲ ಇಚ್ಛಾಶಕ್ತಿ ಇಲ್ಲ ಹಾಗಾಗಿಯೇ ಮಹದಾಯಿ ವಿವಾದ ದೊಡ್ಡದಾಗಿ ಕೂತಿದೆ ಎಂದರು.
ಆಗ ದೇವೇಗೌಡ ಅವರು ಮಾಡಿದ ಆದೇಶದ ಪ್ರತಿಯನ್ನು ಸ್ಪೀಕರ್ ಸೇರಿದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸದಸ್ಯರಿಗೆ ದತ್ತ ಅವರು ಹಂಚಿದರು. 'ಆದೇಶದ ಪ್ರತಿಯನ್ನು ಕೇಂದ್ರಕ್ಕೆ ಕಳಿಸಿಕೊಡಿ' ಎಂದು ಬಿಜೆಪಿ ಅವರಲ್ಲಿ ವಿನಂತಿಸಿಕೊಂಡ ದತ್ತ ಅವರು ಪ್ರಧಾನಿ ಮನಸು ಮಾಡಿದ್ರೆ ಮಹದಾಯಿ ವಿವಾದ ಬಗೆಹರಿಸುವುದು 5 ನಿಮಿಷದ ಕೆಲಸ, ತಡ ಮಾಡಿದರೆ ನಮಗೆ ಮಾಡುವ ದ್ರೋಹ ಅಂತಲೇ ಅರ್ಥ ಮಾಡಿಕೊಳ್ಳಬೇಕಾಗುತ್ತೆ ಕೂಡಲೇ ಕೇಂದ್ರದ ಮೇಲೆ ಒತ್ತಡ ಹಾಕಿ' ಬಿಜೆಪಿ ಶಾಸಕರಿಗೆ ಮನವಿ ಮಾಡಿದರು.