ಬೆಳಗಾವಿಯಲ್ಲಿ ವೇತನ ಸಿಗದೇ ಕಂಗಾಲಾದ ಕಾರ್ಮಿಕರು
ಬೆಳಗಾವಿ, ಮೇ 16: ಮಹಾಮಾರಿ ಕೊರೊನಾ ವೈರಸ್ ಜನರ ಬದುಕನ್ನೇ ನುಂಗುತ್ತಿದ್ದರೆ, ಲಾಕ್ ಡೌನ್ ನಿಂದಾಗಿ ಕಂಪನಿಗಳು ಶೆಟರ್ ಡೌನ್ ಮಾಡಿವೆ. ಇದರಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
Recommended Video
ಕಂಪನಿಯಲ್ಲಿ ದುಡಿದು ಬದುಕುವ ಕಾರ್ಮಿಕರು ಕಂಗಾಲಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಆರ್ಥಿಕ ಮುಗ್ಗಟ್ಟಿದೆ ಎಂದು ಬೆಳಗಾವಿಯ ಆಟೋಮೊಬೈಲ್ ಕಂಪನಿಯನ್ನು ಬಂದ್ ಮಾಡಿದ ಹಿನ್ನಲೆಯಲ್ಲಿ ಅಲ್ಲಿಯ ಕಾರ್ಮಿಕರು ಕೆಲಸ ಕಳೆದುಕೊಂಡು, ಎರಡು ತಿಂಗಳ ವೇತನವೂ ಸಿಗದೇ ಕಂಪನಿಯ ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದೆ.
ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುವ 140 ಕ್ಕೂ ಹೆಚ್ಚು ಕಾರ್ಮಿಕರು ಅತಂತ್ರವಾಗಿದ್ದಾರೆ. ಬೆಳಗಾವಿಯ ಬಾಲು ಇಂಡಿಯಾ ಕಂಪನಿ ಕಾರ್ಮಿಕರು ಈಗ ಅತಂತ್ರ ಪರಿಸ್ಥಿತಿಯಲ್ಲಿದ್ದು, ಎರಡು ತಿಂಗಳ ವೇತನವೂ ಸಿಗದೇ ಪರದಾಡುತ್ತಿದ್ದಾರೆ.
ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ
ಬೆಳಗಾವಿ ತಾಲ್ಲೂಕಿನ ಕಾಕತಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಕಂಪನಿ ಈಗ ಬಂದ್ ಆಗಿದೆ. ವೇತನ ಕೇಳಲು ಹೋದ ಕಾರ್ಮಿಕರನ್ನು ಗೇಟಿನ ಒಳಗಡೆ ಬಿಡದೇ ಈ ಕಂಪನಿ ಶೀಲ್ ಡೌನ್ ಮಾಡಿಕೊಂಡಿದೆ.
ಲಾಕ್ಡೌನ್ ಹಿನ್ನೆಲೆ ಮಾರ್ಚ್ 24 ರಿಂದ ಕಂಪನಿ ಬಂದ್ ಮಾಡಲಾಗಿತ್ತು. ಲಾಕ್ಡೌನ್ ಸಡಿಲಿಕೆ ಬಳಿಕ ಮೇ 4 ರಂದು ತೆರೆಯಲಾಗಿತ್ತು. ಮೇ 11 ರವರೆಗೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕಂಪನಿ ಈಗ ಬಾಗಿಲು ಹಾಕಿಕೊಂಡಿದೆ.
ಮೇ 11 ರಿಂದ ಕೆಲಸಕ್ಕೆ ಬರಬೇಡಿ ಎಂದು ಕಂಪನಿಯ ಮಾಲೀಕ ಕಂಪನಿಯ ಗೇಟ್ಗೆ ನೋಟಿಸ್ ಹಚ್ಚಿದ್ದಾರೆ. ಮುಂಬೈ ಮೂಲದ ಜಸ್ಪಾಲ್ ಸಿಂಗ್ ಚಂದೊಕ್ ಈಗ ಕಾರ್ಮಿಕರಿಗೆ ಎರಡು ತಿಂಗಳ ವೇತನ ಕೊಡದೇ ಇರುವದರಿಂದ ಅಲ್ಲಿಯ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ.
ಬೆಳಗಾವಿ: ಪಿಎಂ ಕೇರ್ಸ್ ಗೆ 1 ಲಕ್ಷ ರೂ, ಕೊಟ್ಟ 85 ರ ವೃದ್ಧೆ
ಸಂಕಷ್ಟದಲ್ಲಿರುವ ಕಾರ್ಮಿಕರು ದಿನನಿತ್ಯ ಕಂಪನಿ ಕಚೇರಿ ಎದುರು ಕುಳಿತು, ಸಂಜೆ ಮನೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ.
ತಮಗೆ ನ್ಯಾಯ ದೊರಕಿಸಿಕೊಡುವಂತೆ ಈ ಕಂಪನಿಯ ಕಾರ್ಮಿಕರು ಬೆಳಗಾವಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.