ಬೆಳಗಾವಿಯಲ್ಲಿ ಕಾರಿಗೆ ಬೆಂಕಿ ; ದುರಂತದಲ್ಲಿ ಸತ್ತ ಮಹಿಳೆ ಯಾರು?
ಬೆಳಗಾವಿ, ಮಾರ್ಚ್ 20: ಬೆಳಗಾವಿ- ಅಂಬೋಲಿ ಜಲಪಾತದ ಬಳಿ ಕಾರು ಹೊತ್ತಿ ಉರಿದ ಘಟನೆ ನಿನ್ನೆ ನಡೆದಿದ್ದು, ಬೆಂಕಿಯಲ್ಲಿ ಕಾರಿನಲ್ಲಿದ್ದ ಮಹಿಳೆ ಸುಟ್ಟು ಭಸ್ಮವಾಗಿದ್ದರು. ಕಾರು ಚಲಿಸುತ್ತಿದ್ದಾತ ಬೆಂಕಿಯಿಂದ ಪಾರಾಗಿದ್ದು, ಸತ್ತಿದ್ದು ಆತನ ಹೆಂಡತಿ ಎನ್ನಲಾಗಿತ್ತು. ಆದರೆ ಇದೀಗ ಈ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಗೊಂಡಿದೆ.
ನಿನ್ನೆ ರಾತ್ರಿ ಅಂಬೋಲಿಯ ಜಲಪಾತದ ಬಳಿ ಸಂಭವಿಸಿದ ಕಾರು ಅಗ್ನಿ ದುರಂತ ಬೆಳಗಾಗುವಷ್ಟರಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ. ಕಾರಿನಲ್ಲಿ ಸುಟ್ಟು ಭಸ್ಮವಾದ ಮಹಿಳೆ ಆತನ ಹೆಂಡತಿ ಅಲ್ಲ ಎನ್ನಲಾಗಿದೆ. ಹೀಗಾಗಿಯೇ ಈ ಘಟನೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ನಿನ್ನೆ ರಾತ್ರಿ ನಡೆದಿದ್ದ ಘಟನೆ
ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಪೀರನವಾಡಿ ಗ್ರಾಮದ ದುಂಡಪ್ಪಾ ಪದ್ಮನ್ನವರ ಮತ್ತು ಮಹಿಳೆಯೊಬ್ಬರು ಸಾವಂತವಾಡಿಯಿಂದ ಬೆಳಗಾವಿಗೆ ಬರುತ್ತಿರುವಾಗ ಈ ದುರಂತ ಸಂಭವಿಸಿತ್ತು. ಅಂಬೋಲಿ ಜಲಪಾತದ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಚಲಾಯಿಸುತ್ತಿದ್ದ ದುಂಡಪ್ಪ ಕಾರಿನಿಂದ ಜಿಗಿದು ತಪ್ಪಿಸಿಕೊಂಡಿದ್ದಾಗಿ ತಿಳಿದುಬಂದಿತ್ತು. ಕಾರಿನಲ್ಲಿದ್ದ ದುಂಡಪ್ಪನ ಪತ್ನಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಕಾರಿನಿಂದ ಹೊರಗೆ ಬರುವಷ್ಟರಲ್ಲಿ ಕಾರು ಧಗಧಗನೇ ಹೊತ್ತು ಉರಿದ ಮಹಿಳೆ ಸುಟ್ಟು ಭಸ್ಮವಾಗಿದ್ದರು ಎಂದು ಸುದ್ದಿಯಾಗಿತ್ತು.
ಕಾರವಾರ; ಚಲಿಸುತ್ತಿದ್ದ ಬೈಕಲ್ಲಿ ಬೆಂಕಿ, ಪೆಟ್ರೋಲ್ ಟ್ಯಾಂಕ್ ಸ್ಫೋಟ
ಕಾರಿನಲ್ಲಿದ್ದ ಆ ಮಹಿಳೆ ಯಾರು?
ಅಂಬೋಲಿಯ ಜಲಪಾತದ ಬಳಿ ಕಾರಿನಲ್ಲಿ ಮೃತಪಟ್ಟ ಮಹಿಳೆ ಗುರುತು ಇದೀಗ ಸಿಕ್ಕಿದ್ದು, ಈಕೆ ಬೆಳಗಾವಿಯ ಕಂಗ್ರಾಳ ಗಲ್ಲಿಯ 41 ವರ್ಷದ ರಿಜ್ವಾನಾ ಪಾತರವಾಟ ಎಂದು ಗುರುತಿಸಲಾಗಿದೆ. ಈ ಮಹಿಳೆಯ ಜೊತೆ ರೆಸಾರ್ಟ್ ಗೆ ದುಂಡಪ್ಪ ಪದ್ಮಣ್ಣವರ ಹೋಗಿದ್ದರು ಎನ್ನಲಾಗಿದೆ. ದುಂಡಪ್ಪ ಫ್ಯಾಮಿಲಿ ಡಾಕ್ಟರ್ ಆಗಿದ್ದು, ರಿಜ್ವಾನಾ ಸಾವು ಅನುಮಾನಾಸ್ಪದವಾಗಿದೆ ಎಂದು ರಿಜ್ವಾನಾ ಪಾತರವಾಟ ಅಳಿಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏಕಾಂಗಿಯಾಗಿ ವಾಸವಿದ್ದ ರಿಜ್ವಾನಾ
ಅಂಬೋಲಿ ಕಾರು ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ರಿಜ್ವಾನಾ ಪಾತರವಾಟ ಬೆಳಗಾವಿಯ ಕಾಂಗ್ರಾಳ ಗಲ್ಲಿಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಇವರಿಗೆ ಒಬ್ಬ ಮಗಳಿದ್ದು, ಮಹಾರಾಷ್ಟ್ರದ ಅಜರಾ ಗ್ರಾಮದಲ್ಲಿದ್ದಾರೆ. ಮಗ ಚೆನ್ನೈನಲ್ಲಿ ಕೆಲಸದಲ್ಲಿದ್ದಾರೆ. ಅಜರಾ ಗ್ರಾಮದಲ್ಲಿರುವ ರಿಜವಾನಾಳ ಅಳಿಯ ಈಗ ರಿಜ್ವಾನಾ ದುಂಡಪ್ಪ ಪದ್ಮಣ್ಣವರ ಹೆಂಡತಿ ಅಲ್ಲ, ಆತ ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿದ್ದು ಇವರಿಬ್ಬರು ಎರಡು ದಿನ ಅಂಬೋಲಿಯ ರೆಸಾರ್ಟ್ ನಲ್ಲಿ ತಂಗಿದ್ದರು. ಈ ದುರಂತದ ಹಿಂದೆ ಕಾರಣ ಬೇರೆ ಇರಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಚಿವ ಈಶ್ವರಪ್ಪ ನಿವಾಸದಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ ಕೋಣೆ
ಆಸ್ಪತ್ರೆಯಲ್ಲಿರುವ ದುಂಡಪ್ಪ
ನಿನ್ನೆ ನಡೆದ ಕಾರು ದುರಂತದಲ್ಲಿ ದುಂಡಪ್ಪ ಪದ್ಮಣ್ಣನವರ್ ಪಾರಾಗಿದ್ದರು. ರಿಜ್ವಾನಾ ಕಾರಿನ ಬೆಲ್ಟ್ ಹಾಕಿಕೊಂಡಿದ್ದರಿಂದ ಕಾರಿನಿಂದ ತಕ್ಷಣ ಹೊರಗೆ ಬರಲು ಸಾಧ್ಯವಾಗದೇ ಕ್ಷಣ ಮಾತ್ರದಲ್ಲಿ ಸುಟ್ಟು ಹೋಗಿದ್ದರು ಎನ್ನಲಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ದುಂಡಪ್ಪ ಪದ್ಮಣ್ಣವರ, ಗೋವಾದ ಬಾಂಬೋಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈತ ಚೇರಿಸಿಕೊಂಡ ಬಳಿಕ ನೈಜ ಕಹಾನಿ ಗೊತ್ತಾಗಲಿದೆ.