ದೇವರೇ ನನ್ನ ಮಗಳನ್ನು ಬದುಕಿಸು: ಕಾವೇರಿಯ ತಾಯಿಯ ಮೊರೆ
ಬೆಳಗಾವಿ, ಏಪ್ರಿಲ್ 24: ಬೆಳಗಾವಿಯ ಝಂಜರವಾಡ ದಲ್ಲಿ ಏಪ್ರಿಲ್ 22, ಶನಿವಾರದಂದು ಸಂಜೆ ಕೊಳವೆ ಬಾವಿಗೆ ಬಿದ್ದ ಕಾವೇರಿಯ ರಕ್ಷಣಾ ಕಾರ್ಯ ಕೊನೆಯ ಹಂತ ತಲುಪಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಕಾವೇರಿಯನ್ನು ಬಾವಿಯಿಂದ ಹೊರತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.[ಅಥಣಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ: ಚುರುಕುಗೊಂಡ ರಕ್ಷಣಾ ಕಾರ್ಯ]
ಕಾವೇರಿಗೆ ಸತತ ಆಮ್ಲಜನಕದ ಪೂರೈಕೆ ಮಾಡಲಾಗುತ್ತಿದ್ದು, ಆಕೆ ಜೀವಂತವಾಗಿ ಹೊರಗೆ ಬರಲಿ ಎಂದು ಇಡೀ ಕನ್ನಡ ನಾಡೂ ಪ್ರಾರ್ಥಿಸುತ್ತಿದೆ. ಆಕೆಯನ್ನು ಹುಕ್ ಮೂಲಕ ಮೇಲಕ್ಕೆತ್ತುವ ಪ್ರಯತ್ನವೂ ನಿನ್ನೆ ನಡೆದಿದ್ದು, ಅದು ವಿಫಲವಾಗಿತ್ತು.
ಆಕೆ ಕೊಳವೆ ಬಾವಿಗೆ ಬಿದ್ದಾಗಿನಿಂದಲೂ ಊಟ-ನಿದ್ದೆ ಬಿಟ್ಟಿರುವ ತಾಯಿ ಸವಿತಾ ಸ್ಥಿತಿ ಸಹ ಹದಗೆಟ್ಟಿದೆ.[ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿ ಕಾವೇರಿ ಬದುಕಿ ಬರಲಿ]
ಯಾವುದೇ ಕ್ಷಣದಲ್ಲಿ ಬಾಲಕಿಯನ್ನು ಹೊರತೆಗೆಯುವ ಸಾಧ್ಯತೆ ಇರುವುದರಿಂದ ಸ್ಟ್ರೆಚರ್ ನೊಂದಿಗೆ ವೈದ್ಯಕೀಯ ಸಿಬ್ಬಂದಿ ಸಹ ಸ್ಥಳಕ್ಕೆ ಆಗಮಿಸಿದ್ದಾರೆ. ಬಾಲಕಿಯನ್ನು ಹೊರತೆಗೆಯುತ್ತಿದ್ದಂತೆಯೇ ತ್ವರಿತವಾಗಿ ಆಸ್ಪತ್ರೆಗೆ ರವಾನಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ.
ಕಾವೇರಿ ಇರುವ ಸ್ಥಳಕ್ಕೆ ತಲುಪಿರುವ ರಕ್ಷಣಾ ಸಿಬ್ಬಂದಿಗೆ ಕಾವೇರಿಯ ಕೈ ಕಾಣಿಸುತ್ತಿದೆ ಎಂಬ ಮಾಹಿತಿಯೂ ಸಿಕ್ಕಿದೆ.
ಯಾರದೋ ನಿಲರ್ಕ್ಷ್ಯದಿಂದಾಗಿ, ಸಾವು-ಬದುಕಿನ ನಡುವಿನ ತೆಳುಗೆರೆಯ ಮೇಲೆ ನಿಂತಿರುವ ಕಾವೇರಿ ಬದುಕಿಬಂದರೆ ಅದು ಪವಾಡವೇ ಸರಿ. ಆ ಪವಾಡ ಇಂದು ಸಂಭವಿಸಿಬಿಡಲಿ ಎಂಬುದು ಕರುನಾಡಿನ ಎಲ್ಲರ ಪ್ರಾರ್ಥನೆ.