ದೆಹಲಿಗೆ ಹೊರಡುವ ಮುನ್ನ ಸೋದರ ಲಖನ್ ಬಗ್ಗೆ ರಮೇಶ್ ಪ್ರೀತಿಯ ಮಾತು
ಬೆಳಗಾವಿ, ಸೆಪ್ಟೆಂಬರ್ 22: "ನಾಳೆ (ಸೋಮವಾರ) ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ಸೂಚಿಸಿದರೆ ಮುಂದಿನ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಕೋರ್ಟ್ ಏನು ಹೇಳುತ್ತದೆ ಎಂಬ ಆಧಾರದಲ್ಲಿ ಮುಂದಿನ ನಿರ್ಧಾರ" ಎಂದು ರಮೇಶ ಜಾರಕಿಹೊಳಿ ಭಾನುವಾರ ಬೆಳಗಾವಿ ಏರ್ ಪೋರ್ಟ್ ನಲ್ಲಿ ಹೇಳಿದರು.
ದೀಪಾವಳಿಗೂ ಮುನ್ನವೇ ಉಪಚುನಾವಣೆ: 15 ಕ್ಷೇತ್ರಗಳ ಪಟ್ಟಿ ಹೀಗಿದೆ...
ದೆಹಲಿಗೆ ತೆರಳುವ ಮುನ್ನ ಮಾಧ್ಯಮದವರ ಜತೆ ಮಾತನಾಡಿದರು. ಉಪ ಚುನಾವಣೆಗೆ ತಡೆಯಾಜ್ಞೆ ಸಿಗಬಹುದಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದಾಗ ಚುನಾವಣೆ ಮಾಡಲು ಬರುವುದಿಲ್ಲ. ಈ ಕುರಿತು ವಕೀಲರ ಜತೆ ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
Big Breaking: ಅನರ್ಹ ಶಾಸಕರು ಉಪ ಚುನಾವಣೆ ಸರ್ಧಿಸಲು ಅವಕಾಶವಿಲ್ಲ
ಗೋಕಾಕ ಕ್ಷೇತ್ರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಹಾಗೂ ಕುತಂತ್ರ ನಡೆಯುತ್ತಿದೆ. ಗೋಕಾಕದ ಮಹಾಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಹೀಗೆ ಪದೇ ಪದೇ ಕುತಂತ್ರ ಮಾಡಿದರೆ ಅದಕ್ಕೆ ಬೆಲೆ ಇರುವುದಿಲ್ಲ. ಸತೀಶ ಜಾರಕಿಹೊಳಿ ಕುತಂತ್ರಕ್ಕೆ 2008ರಲ್ಲಿ ಜನ ಉತ್ತರ ನೀಡಿದ್ದಾರೆ. ನಮ್ಮ ಕುಟುಂಬ ಒಡೆದು, ಮತ ವಿಭಜನೆ ಮಾಡಿಸುವ ಮೂಲಕ ನನ್ನನ್ನು ಸೋಲಿಸಲು ಸತೀಶ ಜಾರಕಿಹೊಳಿ ಕುತಂತ್ರ ಮಾಡುತ್ತಿದ್ದಾನೆ. ಅದು ಸಾಧ್ಯವಾಗುವುದಿಲ್ಲ ಎಂದರು.
ಲಖನ್ ಜಾರಕಿಹೊಳಿ ಬುದ್ಧಿವಂತ ಇದ್ದಾನೆ. ಈ ಕುತಂತ್ರಕ್ಕೆ ಆತ ಬಲಿಯಾಗುವುದಿಲ್ಲ ಎಂಬ ವಿಶ್ವಾಸವಿದೆ. ಲಖನ್ ಜಾರಕಿಹೊಳಿ ಶಾಸಕ ಆದರೆ ಮೊದಲು ಖುಷಿ ಪಡುವ ವ್ಯಕ್ತಿ ನಾನು. ಆದರೆ ಇದು ಸೂಕ್ತ ಸಮಯವಲ್ಲ. ದೆಹಲಿಯಿಂದ ವಾಪಸಾದ ಬಳಿಕ ಲಖನ್ ಗೆ ತಿಳಿಸಿ ಹೇಳುತ್ತೀನಿ. ಅವನೊಂದಿಗೆ ಮಾತುಕತೆ ಮಾಡ್ತೀನಿ. ಅಷ್ಟಕ್ಕೂ ಕೇಳದಿದ್ರೆ ನಾನೇನು ಮಾಡಲಿ? ಈಗಿನ ಸನ್ನಿವೇಶದಿಂದ ಟಿವಿಯವರಿಗೆ ಢವ ಡವ ಶುರುವಾಗಿದೆ ಹೊರತು ನಮಗಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.