ಜಾತಿಗಳ ಮೀಸಲಾತಿ ಹೋರಾಟದ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ, ಫೆಬ್ರವರಿ 12: ಮೀಸಲಾತಿಗಾಗಿ ವಿವಿಧ ಸಮುದಾಯಗಳಿಂದ ಹೋರಾಟದ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಲ ಸಮುದಾಯಗಳು ಮೀಸಲಾತಿಗಾಗಿ ಮಾಡುತ್ತಿರುವ ಹೋರಾಟ ನ್ಯಾಯಬದ್ಧವಾಗಿದೆ, ಇನ್ನು ಕೆಲ ಸಮುದಾಯಗಳ ಹೋರಾಟ ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು.
ಮಹಿಳೆಯರ ಕಷ್ಟ ಕಂಡು ಕಣ್ಣೀರಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ನ್ಯಾಯಬದ್ಧವಾಗಿ ಹೋರಾಡುತ್ತಿರುವ ಸಮುದಾಯಕ್ಕೆ ಮೀಸಲಾತಿ ಸಿಗಬೇಕು, ಸರ್ಕಾರವು ಅಳೆದು, ತೂಗಿ ನಿರ್ಧಾರ ಮಾಡಬೇಕು ಎಂಬುದು ನನ್ನ ಆಗ್ರಹವಾಗಿದೆ ಎಂದರು.
ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಸಿಎಂ ಸಮಯ ಹೇಳಿದ್ದಾರೆ, ಸಿಎಂ ನಿರ್ಧಾರದ ನಂತರ ನಮ್ಮ ಸ್ವಾಮೀಜಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ನೋಡೋಣ ಎಂದು ತಿಳಿಸಿದರು.
ಇದೇ ವೇಳೆ ಅಹಿಂದ ಹೋರಾಟ ಮರು ಆರಂಭದ ಕುರಿತ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಅಹಿಂದ ಹೋರಾಟ ಮರು ಆರಂಭಿಸುವ ಯೋಜನೆಯೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬೇಸ್ ಇದೆ, ಎಲ್ಲ ಸಮುದಾಯಕ್ಕೂ ಕಾಂಗ್ರೆಸ್ ವೇದಿಕೆ ಕಲ್ಪಿಸಿದೆ. ನಾವು ಈ ಅಹಿಂದ ಹೋರಾಟ ಮಾಡಿದಾಗ ಕಾಂಗ್ರೆಸ್ಸಿನಲ್ಲಿ ಇರಲಿಲ್ಲ ಎಂದು ಹೇಳಿದರು.
ಇದೀಗ ನಾವೆಲ್ಲರೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ, ಅಹಿಂದ ಹೋರಾಟ ಮಾಡಲ್ಲ. ಮುಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ಹೋರಾಟ ಮಾಡುವ ಯೋಜನೆ ಇಲ್ಲ ಎಂದ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ, ಅಭ್ಯರ್ಥಿ ಆಯ್ಕೆಗಾಗಿ ಎಂ.ಬಿ ಪಾಟೀಲ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ತನ್ನ ಕೆಲಸವನ್ನು ಮಾಡಿದ್ದು, ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ ಗೆ ರವಾನಿಸಲಾಗಿದೆ. ಅಭ್ಯರ್ಥಿ ಆಯ್ಕೆ ಸಂಬಂಧ ರಚಿಸಲಾಗಿದ್ದ ಕಮಿಟಿ ತನ್ನ ಕೆಲಸ ಮಾಡಿ ಮುಗಿಸಿದೆ ಎಂದರು.