ತುಂಗಭದ್ರಾ ನಾಲೆಗಳಿಗೆ ಜನವರಿಯಿಂದ ನೀರು
ಬೆಳಗಾವಿ, ನವೆಂಬರ್ 14 : ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಬೆಳೆಯಲು ಜನವರಿಯಿಂದ ಮಾರ್ಚ್ 31ರವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸೋಮವಾರ(ನ.13)ರ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾಲುವೆ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇಲ್ಭಾಗದ ಕಾಲುವೆಗಳ ವ್ಯಾಪ್ತಿಯಲ್ಲಿ ಹತ್ತಿ, ಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ನಿತ್ಯ 16ಸಾವಿರ ಕ್ಯೂಸೆಕ್ ನಂತೆ 10 ದಿನಗಳವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಹಾಗೆಯೇ ತಳಮಟ್ಟದ ಕಾಲುವೆಗಳಿಗೆ ದಿನಕ್ಕೆ 700 ಕ್ಯೂಸೆಕ್ ನೀರು ಹರಿಸಿ ಭತ್ತ ಮತ್ತು ಜೋಳದ ಬೆಳೆಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಮೇಲ್ಭಾಗದ ಕಾಲುವೆಗಳಲ್ಲಿ ಈಗಾಗಲೇ ಬೆಳೆಯಲಾಗಿರುವ ಹತ್ತಿ ಮತ್ತು ಜೋಳದ ಬೆಳೆಗೆ ನೀರು ಹರಿಸಬೇಕಾಗಿರುವುದರಿಂದ ಕೇವಲ 10 ದಿನಗಳು ಮಾತ್ರ ನೀರು ಬಿಡಲಾಗುತ್ತದೆ.
ಆದರೆ ತಳಮಟ್ಟದ ಕಾಲುವೆಗಳಲ್ಲಿ ಭತ್ತ ಬೆಳೆಯ ಬೇಕಾಗಿರುವುದರಿಂದ ಜನವರಿಯಿಂದ ಮಾರ್ಚ್ ವರೆಗೂ ನೀರು ಹರಿಸಬೇಕೆಂದು ಬಳ್ಳಾರಿ ಮತ್ತು ರಾಯಚೂರು ಭಾಗದ ರೈತರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಸಭೆ ನಡೆಸಿ ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸಲಹಾ ಸಮಿತಿಯ ಈ ನಿರ್ಧಾರದಿಂದ ತುಂಗಭದ್ರಾ ಜಲಾಶಯ ವ್ಯಾಪ್ತಿಯ ಸುಮಾರು 2ಲಕ್ಷ ಎಕರೆ ಪ್ರದೇಶದ ರೈತರಿಗೆಅನುಕೂಲವಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.