ಮತ್ತೆ ಹಿಂಡಲಗಾ ಜೈಲಿಗೆ ಶಿಫ್ಟ್ ಆದ ವಿನಯ್ ಕುಲಕರ್ಣಿ
ಬೆಳಗಾವಿ, ನವೆಂಬರ್ 09: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸೋಮವಾರ ಧಾರವಾಡದ 3ನೇ ಸೆಷನ್ಸ್ ನ್ಯಾಯಾಲಯ ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಹಿಂಡಲಗಾ ಜೈಲಿಗೆ ಅವರನ್ನು ವಾಪಸ್ ಕರೆತರಲಾಯಿತು.
ಹುಬ್ಬಳ್ಳಿಯಿಂದ ಬೆಳಗಾವಿ ಹೊರವಲಯದ ಹಿಂಡಲಗಾ ಜೈಲಿಗೆ ಐದು ಜನರ ಸಿಬಿಐ ಅಧಿಕಾರಿಗಳ ತಂಡ ವಿನಯ್ ಕುಲಕರ್ಣಿ ಅವರನ್ನು ಸ್ಥಳಾಂತರಿಸಿದೆ. ಈ ಹಿನ್ನೆಲೆಯಲ್ಲಿ ಜೈಲಿನ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿನಯ್ ಕುಲಕರ್ಣಿ ಶಿಫ್ಟ್ ಗೂ ಮುನ್ನ ಕಾನೂನು ಸುವ್ಯವಸ್ಥೆ ಡಿಸಿಪಿ ಕೃಷ್ಣಕಾಂತ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನ.23ರವರೆಗೆ ನ್ಯಾಯಾಂಗ ಬಂಧನದಲ್ಲಿ ವಿನಯ್ ಕುಲಕರ್ಣಿ
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 5ರಂದು ಸಿಬಿಐ ಮೂರು ದಿನಗಳ ಕಾಲ ವಿನಯ್ ಕುಲಕರ್ಣಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತ್ತು. ನ.6ರಂದು ಹಿಂಡಲಗಾ ಜೈಲಿನಿಂದ ಹುಬ್ಬಳ್ಳಿಗೆ ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿದ್ದು, ಧಾರವಾಡದ 3ನೇ ಸೆಷನ್ಸ್ ನ್ಯಾಯಾಲಯ ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.